ಭ್ರಷ್ಟ ವ್ಯವಸ್ಥೆಯಿಂದ ಕೊಡಗು ಜಿಲ್ಲೆ ನಲುಗಿದೆ: ನಾಪಂಡ ಮುತ್ತಪ್ಪ

ಹೊಸದಿಗಂತ ವರದಿ ಮಡಿಕೇರಿ:

ಭ್ರಷ್ಟ ವ್ಯವಸ್ಥೆಯಿಂದ ಕೊಡಗು ಜಿಲ್ಲೆ ನಲುಗಿದ್ದು, ಆಡಳಿತ ವ್ಯವಸ್ಥೆ ಕುಸಿದಿದೆ. ಕಮಿಷನ್ ದಂಧೆಯಿಂದ ಎಲ್ಲಾ ಕಾಮಗಾರಿಗಳು ಕಳಪೆಯಾಗಿವೆ ಎಂದು ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಆರೋಪಿಸಿದ್ದಾರೆ.
ಜೆಡಿಎಸ್ ಮಡಿಕೇರಿ‌ ಕ್ಷೇತ್ರ ಸಮಿತಿ ವತಿಯಿಂದ ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 28ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಂಪೂರ್ಣ ಹಿನ್ನೆಡೆಯಾಗಿದ್ದು, ಕೊಡಗಿನ ಬಿಜೆಪಿ ಕುಟುಂಬವೊಂದರ ತೆಕ್ಕೆಯಲ್ಲಿದೆ ಎಂದು ಟೀಕಿಸಿದರು.
ಇಲ್ಲಿನ ಶಾಸಕರು ತಮ್ಮ ಕಾರಿನಲ್ಲಿ ಹಾರೆ, ಪಿಕಾಸಿ, ಇಟ್ಟುಕೊಂಡು ಹೊದಲ್ಲೆಲ್ಲಾ ಭೂಮಿ ಪೂಜೆ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ರಸ್ತೆ ಹೊಂಡಗಳಿಂದ ಕೂಡಿವೆ ಎಂದು ಕುಟುಕಿದ ಅವರು, 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು 7 ಬಾರಿ ಬಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ ಜನರ ಕಷ್ಟಕ್ಕೆ ಸ್ಪಂದಿಸಿದರು. ಒಂದು ಸಾವಿರ ಮನೆಗಳನ್ನು ಸಂತ್ರಸ್ತರಿಗೆ ನಿರ್ಮಿಸಿಕೊಟ್ಟಿದ್ದಾರೆ. ಬಿಜೆಪಿಯಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಜನರು ರೋಸಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆಲವು ಶತಸಿದ್ದ ಎಂದರು.
ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ ರಾಜ್ಯದಲ್ಲಿ ರೈತರು, ಬಡವರು, ಅಲ್ಪಸಂಖ್ಯಾತರು ನೆಮ್ಮದಿಯಾಗಿ ಬದುಕಲು ಪ್ರಾದೇಶಿಕ ಪಕ್ಷ ಜೆಡಿಎಸ್ ಆಡಳಿತ ಚುಕ್ಕಾಣಿ ಹಿಡಿಯಲೇ ಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!