ಹೊಸದಿಗಂತ ವರದಿ ಪೊನ್ನಂಪೇಟೆ:
ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಡಿಕೇರಿಯಲ್ಲಿ ಮೇ 20 ರಂದು ಕೊಡವ ಯುವ ಮೇಳವನ್ನು ಅಯೋಜಿಸಲಾಗುತ್ತಿದ್ದು,ಇದರ ಕೈಪಿಡಿಯನ್ನು ಪೊನ್ನಂಪೇಟೆಯಲ್ಲಿ ಬಿಡುಗಡೆ ಮಾಡಲಾಯಿತು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟ ಆಯೋಜಿಸಿದ್ದ ಮೀನ್ಯಾರ್ ನಮ್ಮೆಯಲ್ಲಿ ಜಬ್ಭೂಮಿ ಸಂಘಟನೆ ಪ್ರಮುಖರೊಂದಿಗೆ ವೇದಿಕೆಯಲ್ಲಿದ್ದ ಗಣ್ಯರು ಕೈಪಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಬ್ಬೂಮಿ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಅವರು, ಇದೇ ಮೊದಲ ಬಾರಿಗೆ ಕೊಡವ ಯುವ ಮೇಳವನ್ನು ಅಯೋಜಿಸಲಾಗುತ್ತಿದೆ. ಕೊಡಗು ಹಾಗೂ ದೇಶದ ವಿವಿಧೆಡೆ ನೆಲೆಸಿರುವ ಕೊಡವ ಯುವ ಸಮುದಾಯವನ್ನು ಒಂದೆಡೆ ಸೇರಿಸಲು ವೇದಿಕೆ ಕಲ್ಪಿಸಲಾಗುತ್ತಿದೆ. ಕೊಡವ ಜನಾಂಗ ಮತ್ತು ಕೊಡಗಿನ ಬಗ್ಗೆ ದೂರದೃಷ್ಟಿಯಿಂದ ಚಿಂತಿಸಲು, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಮೇಳ ಅಯೋಜಿಸಲಾಗುತ್ತಿದೆ ಎಂದರು.
ಕೊಡವ ಸಮುದಾಯದ 18 ರಿಂದ 40 ವಯೋಮಿತಿಯ ಸುಮಾರು 6 ರಿಂದ 8 ಸಾವಿರ ಯುವ ಜನರನ್ನು ಸೇರಿಸಲು ಸಂಘಟನೆ ಪ್ರಯತ್ನಿಸುತ್ತಿದೆ. ಯುವ ಸಮುದಾಯದೊಂದಿಗೆ ಜನಾಂಗದ ಹಿರಿಯರು ಸಹ ಆಗಮಿಸಿ ಮಾರ್ಗದರ್ಶನ ನೀಡಬೇಕೆಂದು ಕೋರಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ, ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕಿ ಉಳ್ಳಿಯಡ ಡಾಟಿ ಪೂವಯ್ಯ, ಜಬ್ಬೂಮಿ ಸಂಘಟನೆಯ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಪ್ರಮುಖರಾದ ಮಲ್ಲಮಾಡ ಪ್ರಭುಪೂಣಚ್ಚ, ಉಳುವಂಗಡ ಲೋಹಿತ್ ಭೀಮಯ್ಯ, ಕನ್ನಂಡ ಕವಿತಾ, ಚೋಕಿರ ಅನಿತಾ, ಚಂಗುಲಂಡ ಅಶ್ವಿನಿ, ಚಿರಿಯಪಂಡ ಪವನ್ ಬಿದ್ದಪ್ಪ, ಮಾಚಿಮಾಡ ತೇಜ್, ಕೊಟ್ಟಂಗಡ ಸೋಮಣ್ಣ, ಅಡ್ಡೇಂಗಡ ಪ್ರಧಾನ್, ಪೆಮ್ಮಂಡ ಸುಬ್ರಮಣಿ, ಮೂಕಳಮಾಡ ಗಣಪತಿ, ಅಲ್ಲುಮಾಡ ಶೀತಲ್ ಜಗದೀಶ್, ಕೊಕ್ಕಲೆಮಾಡ ಗೌತಮಿ, ನೆಲ್ಲಮಕ್ಕಡ ಪ್ರತಿಷ್ಠಾ ಮಾದಯ್ಯ ಮುಂತಾದವರು ಹಾಜರಿದ್ದರು.