ಹೊಸದಿಗಂತ ವರದಿ ಅಂಕೋಲಾ:
ಸದೃಡ, ಸಮರ್ಥ, ಸಮೃದ್ಧ, ಶಕ್ತಿಶಾಲಿ ಭಾರತ ನಿರ್ಮಾಣದ ಹೆಸರಿನಲ್ಲಿ ಭಾರತೀಯ ಜನತಾ ಪಕ್ಷ ಮತ ಕೇಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಬಜರಂಗದಳವನ್ನು ನಿಷೇದ ಮಾಡುವುದಾಗಿ ಹೇಳಿ ಮತಯಾಚನೆ ಮಾಡಲು ಹೊರಟಿರುವುದು ವಿಷಾದದ ಸಂಗತಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕೆ ಮಾಡಿದರು.
ಅಂಕೋಲಾದ ಹಟ್ಟಿಕೇರಿ ಗೌರಿಕೆರೆಯಲ್ಲಿ ನಡೆದ ಬೃಹತ್ ನವಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ಚಿಂತನೆಗಳು ಇಲ್ಲದೇ ಕೇವಲ ಹಿಂದು ಸಂಘಟನೆಗಳನ್ನು ಹತ್ತಿಕ್ಕುವ ವಿಷಯ ಮುಂದಿಟ್ಟು ಮತ ಕೇಳಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಮತದಾರ ಪಾಠ ಕಲಿಸಲಿದ್ದಾನೆ ಎಂದರು.
ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಈಡಿಗ ನಾಮಧಾರಿ ಸಮಾಜದವರಿಗೆ ನಾರಾಯಣ ಗುರು ನಿಗಮ ಕೊಡುಗೆ ನೀಡಿರುವುದು, ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಿಸಿರುವುದು, 75 ಯುನಿಟ್ ವಿದ್ಯುತ್ ಉಚಿತ ನೀಡಿರುವುದು ಸೇರಿದಂತೆ ಹಲವಾರು ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಚೈನಾ ನಿರ್ಮಿತ ರೇಡಿಯೋ ಇದ್ದಂತೆ, ಆ ಗ್ಯಾರಂಟಿ ಕಾರ್ಡಿಗೆ ಯಾವುದೇ ವಾರಂಟಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.