ಹೊಸದಿಗಂತ ವರದಿ ಮಂಗಳೂರು:
ಮಂಗಳೂರಿನಲ್ಲಿ ನ.19 ರಂದು ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ)ಗೆ ಹಸ್ತಾಂತರಿಸಲಾಗಿದೆ.
ಕುಕ್ಕರ್ ಬಾಂಬ್ ಸ್ಫೋಟದ ಮೂಲಕ ಆತಂಕ ಸೃಷ್ಟಿಸಿದ್ದ ಉಗ್ರ ಮುಹಮ್ಮದ್ ಶಾರಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳೂರು ಪೊಲೀಸರಿಂದ ವಿಚಾರಣೆ ಆರಂಭವಾಗಿದೆ. ಈ ನಡುವೆ ಎನ್ಐಎ ಗೆ ಹಸ್ತಾಂತರಿಸುವ ಕುರಿತಂತೆ ನ್ಯಾಯಾಲಯದ ಆದೇಶ ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರಕರಣವನ್ನು ಎನ್ ಐ ಎ ಗೆ ಹಸ್ತಾಂತರಿಸಿದ್ದಾರೆ.
ನ.19ರಂದು ಉಗ್ರ ಮುಹಮ್ಮದ್ ಶಾರಿಕ್ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಮಂಗಳೂರಿನ ನಾಗುರಿ ಎಂಬಲ್ಲಿ ಆಕಸ್ಮಿಕವಾಗಿ ಆತನ ಬಳಿ ಇದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಆಟೋ ಚಾಲಕ ಹಾಗೂ ಆರೋಪಿ ಮುಹಮ್ಮದ್ ಶಾರಿಕ್ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ಗಂಭೀರತೆ ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಗ್ರ ತನಿಖೆಗೆ ಎನ್ ಐಎ ಗೆ ಒಪ್ಪಿಸಿದ್ದರು. ಇದೀಗ ನ್ಯಾಯಾಲಯದ ಮೂಲಕ ಎನ್ ಐಎ ತನಿಖೆಗೆ ಅಧಿಕೃತ ಆದೇಶ ಹೊರಬಿದ್ದಿದೆ.