ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುವ ಜಡಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಗ್ರಾಮ ದೈವ ಕೊಡಮಣಿತ್ತಾಯ ದೈವಸ್ಥಾನ ಬಳಿ ನಿರ್ಮಿಸಲಾದ ಹಳೇ ತಡೆಗೋಡೆ ರಸ್ತೆಗೆ ಕುಸಿದು ಬಿದ್ದಿದ್ದು,ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಈ ಬಗ್ಗೆ ಸುದ್ದಿ ತಿಳಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭುರವರು ತಕ್ಷಣ ಸ್ಥಳಕ್ಕೆ ತೆರಳಿ ರಸ್ತೆಯಿಂದ ಮಣ್ಣು ತೆರವುಗೊಳಿಸಲು ಸಹಕರಿಸಿದರಲ್ಲದೆ ಘಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಳಿಪಾಡಿ ಯವರ ಗಮನಕ್ಕು ತಂದಿದ್ದಾರೆ.
ಹಾಗೆಯೇ ದೈವಸ್ಥಾನದ ಆಡಳಿತ ಸಮಿತಿ ಕೂಡ ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದ್ದು,ಇದಕ್ಕೆ ಸ್ಪಂದಿಸಿದ ಶಾಸಕರು ಸಂಬಂಧ ಪಟ್ಟ ಜಿಲ್ಲಾ ಪಂಚಾಯತ್ ಇಂಜಿನಿಯರ್ ರವರಿಗೆ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡುವುದರ ಜೊತೆಗೆ ರೂ 10 ಲಕ್ಷ ಅನುದಾನವನ್ನು ಘೋಷಿಸಿದರಲ್ಲದೆಶೀಘ್ರವೇ ಕಾಮಗಾರಿ ಆರಂಭಿಸುವಂತೆಯು ಸಂಬಂಧಿಸಿದವರಿಗೆ ಸೂಚಿಸಿದ್ದಾರೆ.
ಶಾಸಕರ ಈ ತುರ್ತು ಸ್ಪಂದನೆಗೆ ಕರ್ಪೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನೆಗೆ ಹಾನಿ
ತಾಲೂಕಿನ ನಾವುರು ಗ್ರಾಮದ ವಿಲ್ ಫ್ರೆಡ್ ಎಂಬುವರ ವಾಸ್ತವ್ಯ ಮನೆಯು ಮಳೆಯಿಂದಾಗಿ ಭಾಗಶಃ ಹಾನಿಯಾಗಿದ್ದರೆ,ಕೆದಿಲಾ ಗ್ರಾಮದ ತಾಳಿ ಪಡ್ಪು ಎಂಬಲ್ಲಿ ಕೆ ಅಬ್ದುಲ್ ಮಜಿದ್ ಎಂಬುವರ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿರುತ್ತದೆ ಬಿ.ಸಿ.ರೋಡು – ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ನಾವೂರ, ಬಡಗುಂಡಿ ಎಂಬಲ್ಲಿ ಮಳೆಗೆ ರಸ್ತೆ ಬದಿಯ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ.
ಸೋಮವಾರ ಸಂಜೆಯವೇಳೆಗೆ ನೇತ್ರಾವತಿಯಲ್ಲಿ ನೀರು 6.50 ಮೀ.ಅಡಿಯಲ್ಲಿ ನೀರು ಹರಿಯುತಿತ್ತು.ಪಾಣೆಮಂಗಳೂರಿನ ಗುಡ್ಡೆಯಂಗಡಿಯಲ್ಲಿ ಪಾಳುಬಿದ್ದ ದೊಡ್ಡಿಯೊಂದು ಧರಾಶಾಹಿಯಾಗಿದೆ