ಹೊಸದಿಗಂತ ವರದಿ ಮಡಿಕೇರಿ:
ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ‘ಸ್ವಜಾತಿ ಬಂಧುಲೆನ ಸಮ್ಮಿಲನ-2023’ಗೆ ಶನಿವಾರ ಚಾಲನೆ ನೀಡಲಾಯಿತು.
ಮೂರ್ನಾಡು ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಮುದಾಯದ ಎಲ್ಲರೂ ಒಟ್ಟು ಸೇರಲು ಮೂರ್ನಾಡು ಹೋಬಳಿ ಘಟಕ ವೇದಿಕೆ ಒದಗಿಸಿರುವುದು ಖುಷಿಯ ವಿಚಾರ ಎಂದರು. ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಮೂರ್ನಾಡು ಹೋಬಳಿ ಘಟಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯ ಎಲ್ಲಾ ಹೋಬಳಿಯೂ ಈ ರೀತಿ ಚಟುವಟಿಕೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಆಗಬೇಕು ಎಂದು ಆಶಿಸಿದರು.
ಮಡಿಕೇರಿ ತಾಲೂಕು ಘಟಕ ಅಧ್ಯಕ್ಷ ರಮೇಶ್ ರೈ ಮಾತನಾಡಿ, ಜಿಲ್ಲೆಯಲ್ಲಿ ಬಂಟರ ಸಂಘಟನೆ ಆರಂಭವಾದಾಗ ಜನ ಕಡಿಮೆ ಸಂಖ್ಯೆಯಲ್ಲಿ ಸೇರುತ್ತಿದ್ದರು. ಮೂರ್ನಾಡು ಹೋಬಳಿ ಘಟಕದವರು ಬಂಟರ ಸಂಘಟನೆಯನ್ನು ಜೀವಂತವಾಗಿರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.