ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನ ಪ್ರಸಿದ್ಧ ಗಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಹತ್ಯೆಯಲ್ಲಿ ತನ್ನ ಗ್ಯಾಂಗ್ ಕೈವಾಡವಿದೆ ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಮೂಲಗಳ ವರದಿಯ ಪ್ರಕಾರ ʼಹತ್ಯೆಯಲ್ಲಿ ತನ್ನ ಗ್ಯಾಂಗ್ ಸದಸ್ಯನ ಕೈವಾಡವಿದೆʼ ಎಂದು ಲಾರೆನ್ಸ್ ಬಿಷ್ಣೋಯಿ ದೆಹಲಿ ಪೋಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಆದರೆ ಹತ್ಯೆಗೂ ತನಗೂ ಯಾವುದೇ ಸಂಬಂಧವಿಲ್ಲ, ನಾನು ಆ ಸಮಯದಲ್ಲಿ ಜೈಲಿನಲ್ಲಿದ್ದೆ, ನನ್ನ ಮೊಬೈಲ್ ಕೂಡ ಬಳಸುತ್ತಿರಲಿಲ್ಲ ಎಂದಿದ್ದಾನೆ.
ಸಿಧು ಹತ್ಯೆಯ ಒಂದು ದಿನದ ನಂತರ ತಿಹಾರ್ ಜೈಲಿನಲ್ಲಿರುವ ಬಿಷ್ಣೋಯಿ ತನಗೆ ಭದ್ರತೆ ಹೆಚ್ಚಿಸುವಂತೆ ಕೇಳಿದ್ದರು ಎನ್ನಲಾಗಿದೆ. ಇನ್ನು ಈ ಬಗ್ಗೆ ಬಿಷ್ಣೋಯಿ ಗ್ಯಾಂಗ್ ಸಂಪರ್ಕವಿರುವ ಕೆನಡಾ ಮೂಲದ ದರೋಡೆಕೋರ ಗೋಲ್ಡೀ ಬ್ರಾರ್ ಕೂಡ ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ ಎನ್ನಲಾಗಿದೆ.