ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದ ಬೆಟ್ಟ ಹತ್ತುವ ವೇಳೆ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ನಿನ್ನೆ ರಾತ್ರಿ ಸಿಕ್ಕಿಬಿದ್ದಿದೆ. ಗುರುವಾರ ರಾತ್ರಿ ನಡೆದ ಈ ಘಟನೆ ಬಳಿಕ ರಾಜ್ಯ ಅರಣ್ಯ ಇಲಾಖೆ ಹಾಗೂ ಟಿಟಿಡಿ ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಎಫ್ಬಿಒ (ಫಾರೆಸ್ಟ್ ಬೀಟ್ ಆಫೀಸರ್)ನಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ, ಎರಡೂ ವಿಭಾಗಗಳ ಸಂಪೂರ್ಣ ಸಿಬ್ಬಂದಿ ಕಾಡು ಪ್ರಾಣಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಂಡರು. ಪರಿಣಾಮವಾಗಿ ಚಿರತೆಯನ್ನು ಹಿಡಿಯಲು ಸ್ಥಾಪಿಸಲಾದ ಬೋನಿನಲ್ಲಿ ಸಿಕ್ಕಿಬಿದ್ದಿದೆ. ಚಿರತೆ ಸೆರೆಯಿಂದ ಕಾಲು ನಡಿಗೆಯಲ್ಲಿ ಹೋಗುತ್ತಿದ್ದ ಭಕ್ತರೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಕಾಡು ಪ್ರಾಣಿಗಳ ಜಾಡು ಹಿಡಿಯಲು ಅರಣ್ಯದಲ್ಲಿ ಒಟ್ಟು 150 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಚಿರತೆಗಳನ್ನು ಹಿಡಿಯಲು ವಿವಿಧೆಡೆ 4 ಬೋನುಗಳನ್ನು ಹಾಕಲಾಗಿದೆ. ದಟ್ಟ ಅರಣ್ಯಕ್ಕೆ ಬಿಡುವ ಮುನ್ನ ಚಿರತೆಯನ್ನು ನಿಗಾ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮೂರು ವರ್ಷದ ಬಾಲಕ ಕೌಶಿಕ್ ತನ್ನ ಹೆತ್ತವರೊಂದಿಗೆ ತಿರುಮಲಕ್ಕೆ ತೆರಳುತ್ತಿದ್ದಾಗ 7ನೇ ಮೈಲಿನಲ್ಲಿರುವ ಟ್ರಯಲ್ ನಲ್ಲಿ ಚಿರತೆ ದಾಳಿ ನಡೆಸಿತ್ತು. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲಿಪಿರಿ ಕಾಲುದಾರಿಯಲ್ಲಿ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ ಸ್ಥಳವನ್ನು ಟಿಟಿಡಿ ಇಒ ಧರ್ಮರೆಡ್ಡಿ ಮತ್ತೊಮ್ಮೆ ಪರಿಶೀಲಿಸಿದರು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.