ಅಭಿವೃದ್ಧಿ ವಿಚಾರದಲ್ಲಿ ನಾನು ಏನು ಮಾಡಿದ್ದೇನೆ ಎನ್ನುವವರು ತಾವೆಷ್ಟು ಮಾಡಿದ್ದಾರೆ ತೋರಿಸಲಿ: ಕೈ ನಾಯಕರಿಗೆ ರಾಘವೇಂದ್ರ ಸವಾಲ್

ಹೊಸದಿಗಂತ, ಮಂಗಳೂರು:

ಈಶ್ವರಪ್ಪ ಜೊತೆ ಪಕ್ಷದ ನಾಯಕರು ಮಾತುಕತೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ಸು ಕಾಣುತ್ತಾರೆ. ಈ ಬಗ್ಗೆ ಅನುಮಾನ ಬೇಡ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಬಿಜೆಪಿಯ ಹಿರಿಯ ಮುಖಂಡರು. ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿಯಾಗಿಸುವುದು ನಮ್ಮ ಕನಸು ಎಂದು ಅವರೇ ಹೇಳಿದ್ದಾರೆ. ಅದು ನಮ್ಮ ಕನಸೂ ಕೂಡಾ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾದರೆ ಮೋದಿಯವರ ಕೈ ಬಲಪಡಿಸಿದಂತಾಗುತ್ತದೆ. ಈಶ್ವರಪ್ಪ ಅವರ ಮನವೊಲಿಕೆ ಐಸಸ್ಸು ಕಾಣುತ್ತದೆ ಎಂದು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ಬೈಂದೂರು ಹಾಗೂ ಶಿವಮೊಗ್ಗ ಕ್ಷೇತ್ರಗಳು ಇತರ ಕ್ಷೇತ್ರಗಳಿಗಿಂತ ಮುಂದಿವೆ. ನನ್ನ ಅವಧಿಯಲ್ಲಿ ಬೈಂದೂರು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ ಈ ಬಗ್ಗೆ ಶ್ವೇತಪತ್ರ ಹೊರಡಿಸಲು ನಾನು ಸಿದ್ಧ ಎಂದ ಅವರು, ನಾನು ಏನು ಮಾಡಿದ್ದೇನೆ ಎನ್ನುವ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್, ಸ್ವಾತಂತ್ರ್ಯದ ಬಳಿಕದ ೭೦ ವರ್ಷಗಳಲ್ಲಿ ಬೈಂದೂರನ್ನು ಎಷ್ಟು ಅಭಿವೃದ್ಧಿಪಡಿಸಿದ್ದಾರೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ಸಿನ ಕೆಲವು ನಾಯಕರು ನನ್ನ ಬಗ್ಗೆ ಕೆಳ ಮಟ್ಟದ ಭಾಷೆ ಪ್ರಯೋಗಿಸುತ್ತಿದ್ದಾರೆ. ಇದು ರಾಷ್ಟ್ರೀಯ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ. ಭಾಷೆ ಬಳಕೆ ನನಗೂ ಗೊತ್ತಿದೆ ಆದರೆ ನಮಗೆ ಸೌಜನ್ಯವಿದೆ. ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಇದೇ ಸಂದರ್ಭ ಅವರು ಕಿವಿಮಾತು ಹೇಳಿದರು.
ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿಯ ಇತರ ಮುಖಂಡರುಗಳು ಈ ಸಂದರ್ಭದಲ್ಲಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!