ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಹರಿದ್ವಾರದ ಕಾಂಗ್ರಾ ಘಾಟ್ನಲ್ಲಿ ಗಂಗಾಸ್ನಾನಕ್ಕೆ ಇಳಿದಿದ್ದ ಶಿವಭಕ್ತನೊಬ್ಬ ಗಂಗಾ ನದಿಯ ಪ್ರಬಲ ಪ್ರವಾಹದಲ್ಲಿ ಸಿಲುಕಿಕೊಂಡು ಕೊಚ್ಚಿಹೋಗುತ್ತಿದ್ದ ಸಂದರ್ಭದಲ್ಲಿ ಎಸ್ಡಿಆರ್ಎಫ್ ಜವಾನರೊಬ್ಬರು ಜೀವದ ಹಂಗುತೊರೆದು ರಕ್ಷಣೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಈ ದಿಢೀರ್ ಘಟನೆಯಿಂದಾಗಿ ಕೆಲ ಕ್ಷಣಗಳ ಕಾಲ ಘಾಟ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿದ್ದ ಭಕ್ತರು ಭಯಭೀತರಾಗಿದ್ದರು. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಯುವಕ ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಏಕಾಏಕಿ ನೀರಿನ ವೇಗದ ಸೆಳೆತಕ್ಕೆ ಸಿಲುಕಿದ್ದಾನೆ. ಈ ವೇಳೆ ಆತ ಸಹಾಯಕ್ಕಾಗಿ ಕೂಗಾಡುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತಂಕಗೊಂಡು ರಕ್ಷಣೆಗೆ ಮೊರೆಯಿಟ್ಟರು.
ಅದೇ ಸಮಯದಲ್ಲಿ ಕರ್ತವ್ಯದಲ್ಲಿದ್ದ ರಾಜ್ಯ ವಿಪತ್ತು ನಿರ್ವಹಣಾ ದಳದ ಜವಾನ ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಯಾವುದೇ ವಿಳಂಬ ಮಾಡದೆ ಗಂಗಾ ನದಿಗೆ ಧುಮುಕಿದರು. ಪ್ರಬಲ ಪ್ರವಾಹವನ್ನು ಲೆಕ್ಕಿಸದೆ ಯುವಕನತ್ತ ಈಜಿ ತಲುಪಿದ ಅವರು ಸಾಕಷ್ಟು ಸಮಯದ ಹೋರಾಟದ ಬಳಿಕ ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು.



