ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ನಟಿ ಲೀಲಾವತಿಯವರು (Leelavathi) ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ತಾಯಿಯೇ ಸರ್ವಸ್ವ ಎಂದುಕೊಂಡು ಬದುಕಿದ್ದ ವಿನೋದ್ ರಾಜ್ ಇಂದು ಒಬ್ಬಂಟಿಯಾಗಿದ್ದಾರೆ.
ಅಮ್ಮನ ಅಂತಿಮ ಸಂಸ್ಕಾರ ಮಾಡಿ ಬಳಿಕ ಮಾತನಾಡಿದ ಅವರು,ಅಮ್ಮ ಆಡಿದ ಕೊನೆಯ ಮಾತುಗಳನ್ನು ನೆನಪು ಮಾಡಿಕೊಂಡಿದ್ದಾರೆ.
‘ಕಳೆದ ಹದಿನೈದು ದಿನಗಳಲ್ಲಿ ಅಮ್ಮ ಹೆಚ್ಚು ಮಾತನ್ನೇ ಆಡಿಲ್ಲ. ಅವರಿಗೆ ಸಾಧ್ಯವಾಗುತ್ತಿರಿಲಿಲ್ಲ. ಆಗಾಗ್ಗೆ ವಿನೋದ್, ಮಗನೇ ಎಂದು ಕರೆಯುತ್ತಿದ್ದರಷ್ಟೆ. ಅವರಿಗೆನೀರು ಕುಡಿಸುವಂತೆ ನನ್ನನ್ನು ಕೇಳಿದರು, ನೀರು ಕುಡಿಸಿದೆ, ನೀರು ಕುಡಿದು ಕಣ್ಣು ಮುಚ್ಚಿ ಬಿಟ್ಟರು’ ಎಂದು ನೆನಪು ಮಾಡಿಕೊಂಡಿದ್ದಾರೆ.
ನನ್ನಿಂದ ಅಮ್ಮನನ್ನು ಯಾರೂ ದೂರ ಮಾಡಿಲ್ಲ, ಅದು ಸಾಧ್ಯವೂ ಇಲ್ಲ. ಅಮ್ಮನನ್ನು ನಾನು ನನ್ನ ಬಳಿಯೇ ಇಟ್ಟುಕೊಂಡಿದ್ದೇನೆ. ಇಂದು ಅವರಿಗೆ ಇಷ್ಟವಾದ ಭೂಮಿಯಲ್ಲೇ ಮಣ್ಣು ಮಾಡಿದ್ದೇನೆ. ಮುಂದೆ ಅವರ ಸಮಾಧಿ ಸ್ಥಳವನ್ನು ಒಳ್ಳೆಯ ದೇವಾಲಯದಂತೆ ಮಾಡುತ್ತೀನಿ. ಅಭಿಮಾನಿಗಳಿಗೆ ಇಷ್ಟವಾಗುವಂತೆ ಅವರ ಒಳ್ಳೆಯ ಭಾವಚಿತ್ರಗಳನ್ನು ಹಾಕಿಸುತ್ತೀನಿ, ಅವರ ಸಿನಿಮಾದ ಹಾಡುಗಳು ಸದಾ ಅಲ್ಲಿ ಗುನುಗುತ್ತಲೇ ಇರುವಂತೆ ಮಾಡುತ್ತೀನಿ. ನಾನು ಪ್ರತಿದಿನ ಅಲ್ಲಿಗೆ ಹೋದಾಗ ನನಗೆ ಒಳ್ಳೆಯ ಚೈತನ್ಯ ಬರಬೇಕು, ಹಾಗೆಯೇ ಅವರ ಅಭಿಮಾನಿಗಳು ಬಂದಾಗಲೂ ಅವರಿಗೂ ಚೈತನ್ಯ ಮೂಡಬೇಕು ಅಂಥಹಾ ಒಂದು ಒಳ್ಳೆಯ ಸ್ಮಾರಕವನ್ನು ನಾನು ನಿರ್ಮಾಣ ಮಾಡುತ್ತೀನಿ ಎಂದು ವಿನೋದ್ ರಾಜ್ ಹೇಳಿಕೊಂಡಿದ್ದಾರೆ.
ಈ ವೇ ಪುತ್ರನ ಬಗ್ಗೆಯೂ ಮಾತನಾಡಿದ ವಿನೋದ್ ರಾಜ್, ನನ್ನ ಪುತ್ರ ಯುವರಾಜ್ ಎಂದರೆ ಅಮ್ಮನಿಗೆ ಬಹಳ ಪ್ರೀತಿ. ಕಳೆದ ಬಾರಿ ಬಂದಿದ್ದಾಗ ಅಜ್ಜಿ ಎಂದು ಕರೆದೊಡನೆ ಕಣ್ಣು ಬಿಟ್ಟು ನೋಡಿದ್ದರು. ಅವನು ಹೋಗುವವರೆಗೆ ಅವನನ್ನೇ ನೋಡುತ್ತಲೇ ಇದ್ದರು. ಆದ್ರೆ ಅವನನ್ನು ಚಿತ್ರರಂಗಕ್ಕೆ ತರಬೇಕೆಂಬ ಆಸೆ ಅಮ್ಮನಿಗೆ ಇರಲಿಲ್ಲ. ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆಯಿತ್ತು, ಹಾಗೆಯೇ ಅವನು ಒಳ್ಳೆಯ ವಿಧ್ಯಾಭ್ಯಾಸ ಮಾಡಿದ್ದಾನೆ. ಸಾಫ್ಟ್ವೇರ್ ಉದ್ಯೋಗ ಮಾಡುತ್ತಿದ್ದಾನೆ ಎಂದಿದ್ದಾರೆ.