ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ನಲ್ಲಿ ಮರ ಕಡಿದ ವ್ಯಕ್ತಿಯನ್ನು ಸ್ಥಳೀಯರು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ.
ಸಿಮ್ಡೆಗಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಮರ ಕಡಿಯದಂತೆ ಹಲವು ಬಾರಿ ಹೇಳಿದ್ದರೂ, ಕೇಳದೇ ಮರ ಕಡಿದ ವ್ಯಕ್ತಿಯನ್ನು ಸ್ಥಳೀಯರು ಕೊಂದು ಸುಟ್ಟು ಹಾಕಿದ್ದಾರೆ.
ಸಂಜು ಪ್ರಧಾನ್ ಮೃತರು. ಸಂಜು ಕಡಿದ ಮರ ಪವಿತ್ರವಾದ ಮರವಾಗಿತ್ತು. ಇದನ್ನು ಕಡಿದರೆ ಅಥವಾ ಮರ ತಾನಾಗಿಯೇ ಬಿದ್ದರೆ ಅದನ್ನು ಅಪಶಕುನ ಎಂದು ಇಲ್ಲಿಯ ಜನ ಪರಿಗಣಿಸುತ್ತಾರೆ. ಇದೇ ಕಾರಣದಿಂದ ಈ ಮರ ಕಡಿಯದಂತೆ ಸ್ಥಳೀಯರು ಹೇಳಿದ್ದರು.
ಕಟ್ಟಿಗೆಗಾಗಿ ಸಂಜು ಮರ ಕಡಿದು ಸಂಜೆ ಮನೆಗೆ ವಾಪಾಸಾಗಿದ್ದಾನೆ. ಮನೆಗೆ ಬಂದ ಸ್ಥಳೀಯರು ಆತನನ್ನು ಮಾತನಾಡಲು ಹೊರಗೆ ಕರೆದು ಒಂದೇ ಸಮನೆ ಕಲ್ಲಿನಿಂದ ಹೊಡೆದಿದ್ದಾರೆ. ಆತ ಪ್ರಾಣ ಬಿಟ್ಟ ನಂತರ ಅಲ್ಲೇ ಇದ್ದ ಕಟ್ಟಿಗೆ ಒಟ್ಟು ಮಾಡಿ ಸುಟ್ಟು ಹಾಕಿ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂ ಹೇಮಂತ್ ಸೂರೆನ್ ಸೂಚಿಸಿದ್ದಾರೆ.