ಹೊಸದಿಗಂತ ಬಳ್ಳಾರಿ:
ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಮತದಾರರು, ಸರದಿಯಲ್ಲಿ ನಿಂತು ಅತ್ಯುತ್ಸಾಹದಿಂದ ಮತದಾನ ಮಾಡುವುದು ಕಂಡು ಬಂದಿದ್ದು, ಶೇ.10.37 ರಷ್ಟು ಮತದಾನವಾಗಿದೆ.
ಬಿರುಬಿಸಿಲಿನ ಪ್ರತಾಪ ಎರಿಕೆಯಾಗುತ್ತಿದ್ದಂತೆ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆ ಕೇಂದ್ರಕ್ಕೆ ತೆರಳಿ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಟ್ಟೆ ಕೇಂದ್ರದ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರು ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿರುವುದು ಕಂಡು ಬಂತು.
ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು, ನಗರದ ಮಹಿಳಾ ಪೋಲೀಸ್ ಠಾಣೆ ಬಳಿಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಕೈ ಅಭ್ಯರ್ಥಿ ಈ.ತುಕಾರಾಂ, ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ನಗರ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಮತದಾನ ಮಾಡಿ ಗೆಲುವಿನ ನಗೆ ಬೀರಿದರು.