ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ಲಕ್ನೋ ಸೂಪರ್ಜೈಂಟ್ಸ್ ಪ್ಲೇಆಫ್ ಆಸೆ ಬಹುತೇಕ ಕೈಚೆಲ್ಲಿದಂತಾಗಿದೆ. ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿರುವ ತಂಡ, ಉಳಿದ ಪಂದ್ಯಗಳಿಗಿಂತ ಈಗ ಮುಂದಿನ ಆವೃತ್ತಿಯತ್ತ ಗಮನ ಹರಿಸಲು ಆರಂಭಿಸಿದೆ ಎಂಬ ಸಂದೇಶ ನಾಯಕ ರಿಷಭ್ ಪಂತ್ ಮಾತುಗಳಲ್ಲಿ ಸ್ಪಷ್ಟವಾಗಿದೆ.
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಪಂತ್, ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದರೂ ನಿರೀಕ್ಷಿತ ಫಲಿತಾಂಶ ಬರಲಿಲ್ಲ ಎಂದು ಒಪ್ಪಿಕೊಂಡರು. ಕೆಲವೊಮ್ಮೆ ಯೋಜನೆಗಳು ಮೈದಾನದಲ್ಲಿ ಫಲ ನೀಡುವುದಿಲ್ಲ, ಆದರೆ ಅದರಿಂದ ಪಾಠ ಕಲಿಯುವುದು ಮುಖ್ಯ ಎಂದು ಹೇಳಿದರು. ಇದೇ ಕಾರಣಕ್ಕೆ ಬ್ಯಾಟಿಂಗ್ ಕ್ರಮದಲ್ಲೂ ಬದಲಾವಣೆ ಮಾಡಿ, ಮುಂದಿನ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವತ್ತ ಚಿಂತನೆ ನಡೆಸಿದ್ದೇವೆ ಎಂದು ಸೂಚಿಸಿದರು.
ಇದನ್ನೂ ಓದಿ:
ಈ ಋತುವಿನ ಆರಂಭದಲ್ಲೇ ಲಕ್ನೋಗೆ ಹಿನ್ನಡೆ ಎದುರಾಯಿತು. ಮೊದಲ ಸೋಲಿನ ಬಳಿಕ ಎರಡು ಗೆಲುವುಗಳ ಮೂಲಕ ಲಯ ಕಂಡರೂ, ನಂತರ ಸತತ ಸೋಲುಗಳು ತಂಡದ ಆತ್ಮವಿಶ್ವಾಸಕ್ಕೆ ಹೊಡೆತ ನೀಡಿದವು. ಹಲವು ಪಂದ್ಯಗಳಲ್ಲಿ ಹೋರಾಟ ತೋರಿದರೂ ಅಂತಿಮ ಕ್ಷಣದಲ್ಲಿ ಕೈಜಾರಿ ಸೋಲು ಕಂಡಿತು.
ಈಗ ಲಕ್ನೋಗೆ ಉಳಿದಿರುವುದು ಗೌರವಕ್ಕಾಗಿ ಹೋರಾಟ ಮಾತ್ರ. ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ಸಮಾಧಾನ ನೀಡುವ ಸವಾಲು ತಂಡದ ಮುಂದಿದೆ.



