ಹೊಸದಿಗಂತ ವರದಿ, ಮಡಿಕೇರಿ
ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಮಕ್ಕಳ ಸಹಾಯವಾಣಿ(1098) ದಿನಾಚರಣೆ ಹಾಗೂ ಮೇ ತಿಂಗಳಲ್ಲಿ ಮಕ್ಕಳ ಸಹಾಯವಾಣಿ (1098) ಮಾಸಾಚರಣೆ ಆಚರಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಮಕ್ಕಳ ಸಹಾಯವಾಣಿ ಸಂಬಂಧಿಸಿದಂತೆ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರ್ವಜನಿಕ ಶಿಕ್ಷಣ, ಸ್ಥಳೀಯ ಸಂಸ್ಥೆಗಳು ಹೀಗೆ ಹಲವು ಇಲಾಖೆಗಳು ಜೊತೆಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು. ಮಕ್ಕಳ ಸಹಾಯವಾಣಿ ದಿನಾಚರಣೆ ಮತ್ತು ಮಾಸಾಚರಣೆ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ಮಾಹಿತಿ ನೀಡಿದರು.
ಶಾಲಾ ವೆಬ್ಸೈಟ್ಗಳಲ್ಲಿ ಮಕ್ಕಳ ಸಹಾಯವಾಣಿ -1098 ಪ್ರದರ್ಶನ ಮಾಡುವುದು, ಕಚೇರಿಯ ಎಲ್ಲಾ ಪತ್ರಗಳ ಫೂಟರ್’ನಲ್ಲಿ ಮಕ್ಕಳ ಸಹಾಯವಾಣಿ-1098 ಪ್ರದರ್ಶನ ಮಾಡುವುದು, ಕಚೇರಿಯ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಂದ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ -1098 ಸಂಪರ್ಕಿಸುವಂತೆ ಪ್ರಮಾಣ ವಚನ ಸ್ವೀಕಾರ ಮಾಡುವುದು, ಜಾಥಾ/ ಮ್ಯಾರಾಥಾನ್ನ್ನು ಮಕ್ಕಳ ಸಹಾಯವಾಣಿ ದಿನಾಚರಣೆ ಎಂದು ಆಯೋಜಿಸುವುದು, ಶಾಲಾ ಮಕ್ಕಳಿಗೆ ಮಕ್ಕಳ ಸಹಾಯವಾಣಿ 1098-ಕುರಿತು ಹಾಡು, ಚಿತ್ರಕಲೆ, ಘೋಷವಾಕ್ಯ ರಚನೆ, ಪೋಸ್ಟರ್ ರಚನೆ ಸ್ಪರ್ಧೆ ಏರ್ಪಡಿಸುವುದು, ಜಿಲ್ಲೆಯಲ್ಲಿ ಮಕ್ಕಳಿಗಾಗಿ ಮಕ್ಕಳ ಸಹಾಯವಾಣಿ ಕುರಿತು ಫೇಸ್ಬುಕ್ ಲೈವ್ ಆಯೋಜಿಸುವುದು, ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ -1098 ಕುರಿತು ಎಲ್ಇಡಿ ಮೂಲಕ ಪ್ರದರ್ಶನ ಏರ್ಪಡಿಸುವುದು. ರಸ್ತೆಯಲ್ಲಿ ಭಿಕ್ಷಾಟನೆ ಮಾಡುವ, ವಸ್ತುಗಳನ್ನು ಮಾರುವ ಮಕ್ಕಳು, ಇನ್ನಿತರ ಯಾವುದೇ ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ -1098 ನ್ನು ಸಂಪರ್ಕಿಸುವಂತೆ ಕ್ರಮವಹಿಸಲು ಟ್ರಾಫಿಕ್ ಪೊಲೀಸ್ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಮಕ್ಕಳ ಸಹಾಯವಾಣಿ ಜಿಲ್ಲಾ ನೋಡಲ್ ಹಾಗೂ ಕೋಲಾಬ್ ಸಂಸ್ಥೆಗಳ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯಕ್ರಮ ಆಯೋಜಿಸುವುದು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ, ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕಿ ಗೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿ, ಪೌರಾಯುಕ್ತ ರಾಮದಾಸ್, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಸುಮತಿ, ಮಕ್ಕಳ ಸಹಾಯವಾಣಿ ವಿಭಾಗದ ನವೀನ್ ಕುಮಾರ್, ರಾಯ್ ಡೇವಿಡ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಮಮತಾ ಮತ್ತಿತರರು ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ