ಮಡಿಕೇರಿಯಲ್ಲಿ ಅಂಚೆ ನೌಕರರು- ಕಾರ್ಮಿಕರ ಪ್ರತಿಭಟನೆ

ಮಡಿಕೇರಿ: ಕೇಂದ್ರ ಸರಕಾರವು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ ಎಂದು ಆರೋಪಿಸಿ ಅಂಚೆ ಸಮನ್ವಯ ಸಮಿತಿ ಕೊಡಗು ವಿಭಾಗದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಜಮಾಯಿಸಿದ ಅಂಚೆ ನೌಕರರು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಸರಕಾರ ಖಾಸಗೀಕರಣ ನೀತಿಯನ್ನು ತಕ್ಷಣವೇ ಕೈ ಬಿಡಬೇಕೆಂದು ಒತ್ತಾಯಿಸಿದರು.

ಅಲ್ಲದೆ ಹೊಸ ಪಿಂಚಣಿ (ಎನ್‍ಪಿಎಸ್) ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, ಜಿಡಿಎಸ್ ನೌಕರರಿಗೆ ಕೇಂದ್ರ ಸರಕಾರದ ಎಲ್ಲಾ ಸವಲತ್ತುಗಳನ್ನು ಜಾರಿಗೊಳಿಸಬೇಕು, ಕಮಲೇಶ್’ಚಂದ್ರ ವರದಿಯ ಶಿಪಾರಸ್ಸು ಅನುಷ್ಠಾನಗೊಳಿಸಬೇಕು, ಕನಿಷ್ಟ ವೇತನಕ್ಕೆ ಸಂಬಂಧಿಸಿದಂತೆ 7ನೇ ವೇತನ ಆಯೋಗದಲ್ಲಿ ನೀಡಿದ ಆಶ್ವಾಸನೆಯನ್ನು ಜಾರಿಗೊಳಿಸಬೇಕು, ವಾರದಲ್ಲಿ 5 ದಿನಗಳನ್ನು ಕರ್ತವ್ಯದ ದಿನವಾಗಿ ಪರಿಣಿಸಬೇಕೆಂದು ಆಗ್ರಹಿಸಿದರು.

ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು, ಶೇ.100 ರಷ್ಟು ಅನುಕಂಪ ಆಧಾರಿತ ನೇಮಕ ಮಾಡಬೇಕು. ಸಿಎಸ್‍ಐ, ಸಿಬಿಎಸ್, ಆರ್‍ಐಸಿಟಿ, ಎಸ್‍ಐಎಫ್‍ವೈ ತಂತ್ರಜ್ಞಾನಗಳಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಬೇಕು, ಐಪಿಪಿಬಿ ಹಾಗೂ ಎಇಪಿಎಸ್ ಗಳ ಅವೈಜ್ಞಾನಿಕ ಟರ್‍ಗೇಟ್‍ಗಳನ್ನು ನೀಡಿ ನೌಕರರಿಗೆ ಕಿರುಕುಳ ನೀಡಬಾರದು, ಕೋವಿಡ್‍ನಿಂದ ಮೃತರಾದ ನೌಕರರ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಬೇಡಿಕೆಯ ಮನವಿ ಪತ್ರವನ್ನು ಕೊಡಗು ವಿಭಾಗದ ಅಂಚೆ ಅಧೀಕ್ಷ ಹೆಚ್.ಜೆ.ಸೋಮಯ್ಯ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿದರು. ಜೆಸಿಎ ಹಾಗೂ ಎಐಪಿಇಯು ಅಧ್ಯಕ್ಷ ಎಂ.ಕೆ.ಮೋಹನ್, ಕಾರ್ಯದರ್ಶಿ ಎಂ.ಎಸ್.ಮಂಜುನಾಥ್, ಜೆಸಿಎ ಉಪಾಧ್ಯಕ್ಷರಾದ ಎ.ಎಮ್.ನರಸಿಂಹ, ಪಿ.ಕೆ.ನಾಣಯ್ಯ, ಕೃಷ್ಣಯ್ಯ, ಕುರಿಯನ್, ಕಾರ್ಯದರ್ಶಿ ಬೇಬಿ ಜೋಸೆಫ್, ಸಹಕಾರ್ಯದರ್ಶಿಗಳಾದ ಟಿ.ಪಿ.ಶ್ರೀನಿವಾಸ್, ಕೃಷ್ಣೇಗೌಡ, ಬಿ.ಎಂ.ಮಂಜುನಾಥ್, ಪಿ.ಇ.ಸುಶೀಲಾ, ಸೂರ್ಯ ಕುಮಾರ್ ಸೇರಿದಂತೆ ಮತ್ತಿತರರು ಪತ್ರಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಮಿಕರ ಪ್ರತಿಭಟನೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕೊಡಗು ಜಿಲ್ಲಾ ಜಂಟಿ ಕ್ರಿಯಾ ಸಮಿತಿ ಬೆಂಬಲ ವ್ಯಕ್ತಪಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಸುದರ್ಶನ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿ, ಕಾರ್ಪೋರೇಟ್ ಪರ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಹಾಗೂ ಪಾರ್ಲಿಮೆಂಟ್‍ನಲ್ಲಿ 4 ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ಮಂಡಿಸಿರುವ ಖಾಸಗಿ ಮಸೂದೆಯನ್ನು ಅಂಗೀಕರಿಸಬೇಕೆಂದು ಪತ್ರಿಭಟನಾಕಾರರು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!