ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಜೊತೆಗೆ ಜಮ್ಮು ಕಾಶ್ಮೀರದ 370ನೇ ಸ್ಥಾನಮಾನ ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಸಭೆಯಲ್ಲಿ ಶಾಸಕರು ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ವೇದಿಕೆಯಲ್ಲಿ ಏನೇ ಇದ್ದರೂಮಾತನಾಡಬೇಕು. ಪಕ್ಷಕ್ಕೆ ಒಳ್ಳೆಯದಾಗುವುದಿದ್ದರೆ ಮಾಧ್ಯಮಗಳ ಜೊತೆ ಮಾತಾಡಿ, ಇಲ್ಲ ಅಂದರೆ ಏನು ಮಾತಾಡಬೇಡಿ. ನಾವೆಲ್ಲರೂ ಸೇರಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡೋಣ. ನಾವು ಒಗ್ಗಟ್ಟಾಗಿ ಚುನಾವಣೆ ಎದುರಿಸಿ 28 ಸ್ಥಾನ ಗೆಲ್ಲಿಸಲು ಕೆಲಸ ಮಾಡೋಣ. ಸದನದಲ್ಲಿ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡಬೇಕು. ಮುಸ್ಲಿಂ ಸಮಾಜಕ್ಕೆ ₹10 ಸಾವಿರ ಕೋಟಿ ಕೊಡುವವರು ರೈತರಿಗೆ ಯಾಕೆ ಹಣ ಕೊಡಲ್ಲ ಎಂಬುದರ ಬಗ್ಗೆ ಪ್ರಶ್ನೆ ಮಾಡಬೇಕು. ಸಣ್ಣ ಪುಟ್ಟ ವ್ಯತ್ಯಾಸ ಸರಿಪಡಿಸಿಕೊಂಡು ಸದನದಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಪಕ್ಷದ ಶಾಸಕರಿಗೆ ಸೂಚಿಸಿದರು.
ಸಿಎಲ್ಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಆರ್ಟಿಕಲ್ 370ನೇ ವಿಧಿ ರದ್ದು ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ್ದೇವೆ. ಡಿ.13 ರಂದು ಸರ್ಕಾರದ ವೈಫಲ್ಯ ಖಂಡಿಸಿ ರೈತರ ಹೋರಾಟವಿದೆ. ನಮ್ಮ ರಾಜ್ಯದಲ್ಲಿ ಹಣಕಾಸು ತೊಂದರೆ ಇಲ್ಲವೆಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ರೈತರಿಗೆ ಬರದ ವಿಚಾರದಲ್ಲಿ ನೆರವಿಗೆ ಬರುತ್ತಿಲ್ಲ. ಅಲ್ಪಸಂಖ್ಯಾತರಿಗೆ ₹ 10 ಸಾವಿರ ಕೋಟಿ ಕೊಡುತ್ತೇವೆ ಎನ್ನುತ್ತಾರೆ ಎಂದರು. ವಿಕಸಿತ ಭಾರತ ಎಂಬ ಅಭಿಯಾನ ನಡೆಯುತ್ತಿದೆ. ಅಧಿವೇಶನ ಮುಗಿದ ಬಳಿಕ ಎಲ್ಲ ಶಾಸಕರು ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ವಿರುದ್ದ ಸಂಘಟಿತ ವಾಗಿ ಹೋರಾಡಲು ತೀರ್ಮಾನಿಸಲಾಗಿದೆ ಎಂದರು.
ಸ್ವೀಕರ್ ಬಗ್ಗೆ ಸಚಿವ ಜಮೀರ ಅಹ್ಮದ ನೀಡಿದ ಹೇಳಿಕೆ ವಿಚಾರದಲ್ಲಿ ಸದನದಲ್ಲಿ ಹೋರಾಟ ತೀವ್ರಗೊಳಿಸಲುಸಭೆಯಲ್ಲಿ ತೀರ್ಮಾನಿಸಲಾಗಿದೆ.
ಆದರೆ, ಶಾಸಕಾಂಗ ಪಕ್ಷದ ಸಭೆಗೆ ಅತೃಪ್ತ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಎಸ್.ಟಿ.ಸೋಮಶೇಖರ ಸೇರಿದಂತೆ ಪ್ರಮುಖ ನಾಯಕರು ಗೈರಾಗಿದ್ದಾರೆ.