ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಘಟನೆ ನೋಡಿದ್ರೆ ಹಣ ಇಲ್ಲದಿದ್ದರೆ ಸಾವು ಕೂಡ ಶಾಂತವಾಗಿ ಸಾಗಿಸುವುದಿಲ್ಲವೇನೋ ಅನಿಸುತ್ತದೆ. ಆಸ್ಪತ್ರೆಗಳಿಂದ ಶವ ಸಾಗಿಸಲು ಆಂಬುಲೆನ್ಸ್ ಡ್ರೈವರ್ಗಳು ಬೇಡಿಕೆಯಿಡುವ ಹಣ ಕೊಡಲಾಗದೆ ಅದೆಷ್ಟೂ ಜನ ನೋವನ್ನನುಭವಿಸಿದ್ದಾರೆ. ಈ ಘಟನೆ ಕೂಡ ಅಂಥದ್ದೇ ರೈಲ್ವೆ ನಿಲ್ದಾಣದಲ್ಲಿ ಪ್ರಾಣ ಬಿಟ್ಟ ಸ್ನೇಹಿತನ ಶವ ಸಾಗಿಸಲು ಹಣವಿಲ್ಲದೆ ಸೈಕಲ್ ರಿಕ್ಷಾ ಮೊರೆ ಹೋದ ದಾರುಣ ಘಟನೆ ನಡೆದಿದೆ.
ಜೀವನ ನಿರ್ವಹಣೆಗಾಗಿ ಉತ್ತರ ಪ್ರದೇಶದ ಕಣ್ಣಾಸ್ ಜಿಲ್ಲೆಯ ಧ್ಯಾಸ್ಪುರ ಗ್ರಾಮದಿಂದ ಮುಲಕ್ರಾಜ್ (37) ಮತ್ತ ಆತನ ಇತರ ನಾಲ್ವರು ಸ್ನೇಹಿತರು ಕೆಲ ವರ್ಷಗಳ ಹಿಂದೆ ತೆಲಂಗಾಣದ ಸೂರ್ಯಪೇಟ್ಗೆ ಐಸ್ಕ್ರೀಂ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸಲು ಬಂದಿದ್ದರು. ಭಾನುವಾರ ಐಸ್ ಕ್ರೀಂ ಮಾರಾಟ ಮಾಡುತ್ತಿದ್ದಾಗ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ಅವರನ್ನು ನಕಿರೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆತನನ್ನು ಪರೀಕ್ಷಿಸಿದ ವೈದ್ಯರು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹೈದರಾಬಾದ್ಗೆ ತೆರಳುವಂತೆ ಸೂಚಿಸಿದರು. ಚಿಕಿತ್ಸೆ ಕೊಡಿಸಲು ಸಾಕಷ್ಟು ಹಣವಿಲ್ಲದೆ ಸ್ನೇಹಿತರೆಲ್ಲರೂ ಸ್ವಂತ ಊರಿಗೆ ತೆರಳಲು ನಿರ್ಧಾರ ಮಾಡಿದ್ದಾರೆ.
ಐವರು ಸ್ನೇಹಿತರು ಊರಿಗೆ ತೆರಳಲು ಮಂಗಳವಾರ ಖಮ್ಮಂ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಗೆ ಬರುವಾಗ ಕ್ಷೇಮವಾಗಿದ್ದ ಮುಲಕರಾಜ್ ವಿಶ್ರಾಂತಿ ಪಡೆಯಲು ಪ್ಲಾಟ್ಫಾರ್ಮ್ನಲ್ಲಿ ಮಲಗಿದ್ದು, ಅಲ್ಲಿಯೇ ಆತ ಕೊನೆಯುಸಿರೆಳೆದಿದ್ದಾರೆ. ಸ್ನೇಹಿತನ ಸಾವನ್ನು ಕಂಡ ನಾಲ್ವರಿಗೆ ದಿಕ್ಕು ತೋಚದಂತಾಗಿದೆ. ಮಾಹಿತಿ ತಿಳಿದ ರೈಲ್ವೆ ಪೊಲೀಸರು ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲು ಸೂಚಿಸಿದ್ದಾರೆ.
ಶವ ಸಾಗಿಸಲು ಆಟೋ, ಖಾಸಗಿ ವಾಹನಗಳು 5000 ರೂ, ಹಣ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ಸಾಧ್ಯವಾಗದ ಸ್ನೇಹಿತರು ಕೊನೆಗೆ ಸೈಕಲ್ ರಿಕ್ಷಾ ಕಾರ್ಮಿಕರೊಬ್ಬರಿಗೆ 500 ರೂಪಾಯಿ ನೀಡಿ ತಮ್ಮ ಸ್ನೇಹಿತನ ಶವವನ್ನು ರಿಕ್ಷಾದಲ್ಲಿ ಹಾಕಿ ಖಮ್ಮಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.