ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಕೆಎಲ್ಇ ಸಂಸ್ಥೆಯ ಐಎಂಎಸ್ಆರ್ ಎಂಬಿಎ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಮೇ ೨೦ ರಂದು ರಾಜ್ಯ ಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ (ಮ್ಯಾಡ್ಸ್ ಮೀಟ್೨ಕೆ೨೨) ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ನಿರ್ದೇಶಕ ಡಾ. ರಾಜೇಂದ್ರ ಪ್ರಸಾದ ಹನಗುಂಡಿ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಉದ್ಯಮ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮ್ಯಾನೇಜ್ಮೆಂಟ್ ಉತ್ಸವ ಮಾಡಲಾಗುತ್ತಿದೆ. ಪ್ರಮುಖ ಎರಡು ಅಂಶಗಳನ್ನು ಇಟ್ಟುಕೊಂಡು ಉತ್ಸವ ಆಯೋಜಿಸಲಾಗಿದೆ. ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ಉದ್ಯಮಶೀಲತೆ ಪ್ರಾಮುಖ್ಯತೆ ಹೆಚ್ಚಿಸುವುದಾಗಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ನ್ಯಾವೀನತ್ಯೆ ಮನಸ್ಥಿತಿಗಾಗಿ ಉದ್ಯಮಶೀಲತೆ ಕ್ಷೇತ್ರದಲ್ಲಿ ಪರಿವರ್ತನೆ ತರುವುದಾಗಿದೆ ಎಂದು ಹೇಳಿದರು.
ಈ ಉತ್ಸವದಲ್ಲಿ ಕರ್ಟನ್ ರೈಸರ್, ರೈಸಿಂಗ್ ಪಲಾಡಿನ್, ಮ್ಯಾಚ್ ವಿಜ್, ನೋವಾಸ್ ದಿ ಸೋಶಿಯಲ್ ಎಂಟರ್ ಪ್ರಿನರ್ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.
ಮೇ ೨೦ ರಂದು ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಸೇಪ್ ಹ್ಯಾಂಡ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಮತ್ತು ಟೈ ಅಧ್ಯಕ್ಷೆ ಶ್ರಾವಣಿ ಪವಾರ, ಸ್ವರ್ಣಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ ಮತ್ತು ಶಂಕರಣ್ಣ ಮುನವಳ್ಳಿ ಭಾಗವಹಿಸುವರು ಎಂದರು.
ಹುಬ್ಬಳ್ಳಿ ಧಾರವಾಡ ಬೆಳಗಾವ, ಕುಮಟಾ, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಯವರು ನೋಂದಣಿ ಈಗಾಗಲೇ ಮಾಡಿಸಿದ್ದಾರೆ. ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಹಾಯಕ ನಿಯೋಜಕ ಪ್ರೊ. ಅಮಿತ್ ಅಂಗಡಿ, ಅಮಿತ್ ಮಹಾಜನ್ ಇದ್ದರು.