ಮಂಡ್ಯ| ಪ್ರಧಾನಿ ಭದ್ರತಾ ಲೋಪವೆಸಗಿದ ಪಂಜಾಬ್ ಸರ್ಕಾರ ವಜಾಕ್ಕೆ ಒತ್ತಾಯ

ಹೊಸದಿಗಂತ ವರದಿ, ಮಂಡ್ಯ:

ಪಂಜಾಬ್‌ನಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಕೆಗೆ ತೆರಳುವ ವೇಳೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಭದ್ರತಾ ಲೋಪ ಮಾಡಿರುವ ಅಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಪದಚ್ಯುತಗೊಳಿಸಿ ಸೂಕ್ತ ತನಿಖೆ ನಡೆಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್ ಒತ್ತಾಯಿಸಿದ್ದಾರೆ.
ಭಾರತದ ಪ್ರಧಾನಿಯೊಬ್ಬರು ಒಂದು ರಾಜ್ಯಕ್ಕೆ ತೆರಳಿದಾಗ ಆ ರಾಜ್ಯ ಅವರನ್ನು ಗೌರವದಿಂದ ನಡೆಸಿಕೊಳ್ಳುವುದರ ಜೊತೆಗೆ ಭದ್ರತೆಯನ್ನು ಸರಿಯಾದ ರೀತಿಯಲ್ಲಿ ಮಾಡುವುದು ಅಲ್ಲಿನ ಮುಖ್ಯಮಂತ್ರಿ ಮತ್ತು ಸರ್ಕಾರದ ಕರ್ತವ್ಯವಾಗಿದೆ. ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಲೋಪವನ್ನು ಮುಚ್ಚಿಟ್ಟು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಪ್ರಧಾನಿಯವರು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿದ್ದಾರೆ. 1.4 ಬಿಲಿಯನ್ ಮಂದಿಯ ಏಕೈಕ ಧ್ವನಿಯಾಗಿದ್ದಾರೆ. ನಮ್ಮೆಲ್ಲರ ಪ್ರತಿನಿಧಿಯಾಗಿರುವ ಅವರ ಮೇಲೆ ಆಕ್ರಮಣ ಆದರೆ ದೇಶದ ನಾಗರೀಕರ ಮೇಲೆ ಆಕ್ರಮಣವಾದಂತೆ ಎಂದು ಅವರು ತಿಳಿಸಿದ್ದಾರೆ.
ಪ್ಲೈಓವರ್‌ನಲ್ಲಿ ಪ್ರಧಾನಿಯವರು ಭದ್ರತಾ ಸಿಬ್ಬಂದಿಯ ಸರ್ಪಗಾವಲಿನಲ್ಲಿ ಹೋಗುತ್ತಿದ್ದ ವೇಳೆ ಅಲ್ಲಿನ ಕೆಲವರು ಪ್ಲೈಓವರ್‌ನಲ್ಲೇ ಪ್ರತಿಭಟನೆ ನಡೆಸಿ ಪ್ರಧಾನಿಯವರ ಕಾರನ್ನು ಅಡ್ಡಗಟ್ಟಲು ನಿರ್ಧರಿಸಿದ್ದರು. ಈ ವಿಚಾರ ತಿಳಿದ ಭದ್ರತಾ ಸಿಬ್ಬಂದಿ ಪ್ರತಿಭಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ನರೇಂದ್ರಮೋದಿಯವರ ಕಾರನ್ನು ನಿಲ್ಲಿಸಿದ್ದಾರೆ. ಸುಮಾರು 15 ರಿಂದ 20 ನಿಮಿಷಗಳ ಕಾಲ ಪ್ರಧಾನಿ ನರೇಂದ್ರಮೋದಿಯವರು ಪ್ಲೈಓವರ್‌ನಲ್ಲೇ ನಿಲ್ಲುವಂತಾಗಿದೆ. ಇದು ಆ ರಾಜ್ಯದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಕಾರ‌್ಯಕ್ರಮ ನಿಗಧಿಯಾಗುತ್ತಿದ್ದಂತೆ ಎಲ್ಲ ಭದ್ರತಾ ವ್ಯವಸ್ಥೆ ಸರಿಯಾಗಿದೆ ಎಂದು ತಿಳಿಸಿದ್ದ ಪಂಜಾಬ್ ಸರ್ಕಾರ, ಇಂತಹ ಭದ್ರತಾ ವೈಫಲ್ಯ ಮಾಡಿರುವುದಾದರೂ ಏಕೆ, ಇದರ ಒಳಗುಟ್ಟೇನು, ಈ ಬಗ್ಗೆ ತನಿಖೆ ನಡೆಸಬೇಕು. ಭದ್ರತಾ ಲೋಪಕ್ಕೆ ಕಾರಣವಾದ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!