ಹೊಸದಿಗಂತ ವರದಿ, ಮಂಗಳೂರು:
ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಳ್ಳಾಗಿದೆ. ಆರೋಪಿ ನೆಟ್ವರ್ಕ್ ಇರುವ ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ನಡೆಯುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಬಾಡಿಗೆ ನೀಡಿದವರನ್ನು ಸೇರಿದಂತೆ ಹಲವು ಜನರನ್ನ ವಶಕ್ಕೆ ಪಡೆಯುತ್ತೇವೆ. ಆದರೆ ಅವರು ಆರೋಪಿಗಳೇ ಆಗಿರುವುರಲ್ಲ. ವಿಚಾರಣೆಗೆ ಕರೆಸುತ್ತೇವೆ. ಆದರೆ ಮಾಧ್ಯಮದವರು ಅವರನ್ನು ಅಪರಾಧಿಗಳಂತೆ ತೋರಿಸಬಾರದು ಎಂದು ಅವರು ಮನವಿ ಮಾಡಿದರು.
ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸುವುದು, ಸಮಾಜದಲ್ಲಿ ಶಾಂತಿಯನ್ನು ಕದಡುವುದು, ಸಾರ್ವಜನಿಕವಾಗಿ ಭಯ ಹುಟ್ಟಿಸುವುದು ಇಂತಹ ಭಯೋತ್ಪಾದಕ ಕೃತ್ಯಗಳನ್ನು ನಡೆಸುವವರ ಪ್ರಮುಖ ಉದ್ದೇಶವಾಗಿರುತ್ತದೆ ಎಂದವರು ಹೇಳಿದರು.
ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತೀ ಅಗತ್ಯ. ಆತನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರಲಿದೆ ಎಂದು ಸೂದ್ ಹೇಳಿದರು.