ಹೊಸದಿಗಂತ ವರದಿ ಹುಬ್ಬಳ್ಳಿ:
ದಿವ್ಯಾಂಗರಿಗೆ ಸಹಾಯ ಮಾಡುವುದು ಉಪಕಾರ ಎಂದು ಭಾವಿಸಬಾರದು. ಅವರಲ್ಲಿ ಆತ್ಮ ವಿಶ್ವಾಸ ತುಂಬಿ ಸಮಾಜದಲ್ಲಿ ಅವರನ್ನು ಮುಂದೆ ತರುವ ಕಾರ್ಯವಾಗಬೇಕಿದೆ ಎಂದು ಆರ್.ಎಸ್.ಎಸ್. ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಶನಿವಾರ ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಕ್ಷಮ ಉತ್ತರ ಕರ್ನಾಟಕ ಪ್ರಾಂತದ ನೂತನ ದಿವ್ಯಾಂಗ ಸೇವಾ ಕೇಂದ್ರದ ಉದ್ಘಾಟನೆ ಸಮಾರಂಭ ಹಾಗೂ ಸಕ್ಷಮ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ದಿವ್ಯಾಂಗರಿಗೆ ಭಗವಂತ ಕೊರತೆ ಮಾಡಿರಬಹುದು, ಆದರೆ ಅದನ್ನು ಮೆಟ್ಟಿನಿಲ್ಲುವ ಅಪರೂಪದ ಶಕ್ತಿ ನೀಡಿರುತ್ತಾನೆ. ದಿವ್ಯಾಂಗ ಕ್ಷಮತೆ ಹಾಗೂ ಆತ್ಮ ವಿಶ್ವಾಸ ತುಂಬುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆರುವಂತಹ ಅಪರೂಪದ ಕಾರ್ಯ ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಮಾಡುತ್ತಿರುವುದು ಶ್ಲಾಘನೀಯ ಎಂದರು.
ದಿವ್ಯಾಂಗರು ಧೃತಿಗೆಡದೆ ಆತ್ಮ ವಿಶ್ವಾಸದಿಂದ ವಿದ್ಯಾಭ್ಯಾಸ ಜೊತೆಗೆ ವಿವಿಧ ಕೌಶಲ್ಯ ಬೆಳೆಸಿಕೊಂಡು ಸಮಾಜದಲ್ಲಿ ಯಾರಿಗಿಂತಲೂ ನಾವೇನು ಕಡಿಮೆ ಇಲ್ಲ ಎಂಬಂತೆ ಬದುಕಬೇಕು. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು ಎಂದು ತಿಳಿಸಿದರು.
ಇದಕ್ಕೂ ಮುಂಚೆ ಕಾರವಾರ ರಸ್ತೆ ಮಂಗಲ ಓಣಿಯಲ್ಲಿ ಸಕ್ಷಮ ಸ್ಥಾಪಿಸಿರುವ ನೂತನ ದಿವ್ಯಾಂಗ ಕೇಂದ್ರವನ್ನು ಉದ್ಘಾಟಿಸಿದರು. ಒಂದೇ ಸೂರಿನಡಿ ಸಕಲ ಸೌಲಭ್ಯ ಒದಗುವ ಕೇಂದ್ರ ಈ ದಿವ್ಯಾಂಗ ಕೇಂದ್ರವಾಗಿದೆ.