ಹೊಸದಿಗಂತ ವರದಿ ಕಾಸರಗೋಡು:
ಮಂಜೇಶ್ವರ, ಕುಂಬಳೆ, ಕಾಸರಗೋಡು ಶಿಕ್ಷಣ ಉಪಜಿಲ್ಲೆಗಳನ್ನು ಒಳಗೊಂಡ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ (ಡಿಇಒ) ಕನ್ನಡೇತರರ ನೇಮಕಾತಿ ನಡೆಸಿದ ಕೇರಳ ಸರಕಾರದ ಆದೇಶವನ್ನು ಕೂಡಲೇ ಹಿಂಪಡೆದು ಕನ್ನಡಿಗ ಶಿಕ್ಷಣಾಧಿಕಾರಿಯನ್ನು ನೇಮಿಸಬೇಕೆಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರು ರಾಜ್ಯ ಶಿಕ್ಷಣ ಖಾತೆ ಸಚಿವ ವಿ.ಶಿವನ್ ಕುಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕನ್ನಡ ಭಾಷಾ ಅಧ್ಯಾಪಕರಿಗೆ ಮೀಸಲಾದ ಕಾಸರಗೋಡು ಡಿಇಒ ಹುದ್ದೆಯನ್ನು ಕನ್ನಡಿಗರಿಗೆ ನೀಡದೆ ಹೊರಡಿಸಿದ ಆದೇಶದ ವಿರುದ್ಧ ಗಡಿನಾಡ ಕನ್ನಡಿಗರ ಪ್ರತಿಭಟನೆಗಳನ್ನು ಸಚಿವರ ಗಮನಕ್ಕೆ ತರಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಡೆಸುವ ಎಲ್ಲಾ ಹೋರಾಟಗಳಿಗೂ ತಾನು ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದಾರೆ.