ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಪತ್ತೆಯಾಗಿದ್ದಾರೆ ಎಂದುಕೊಂಡಿದ್ದ ಮಾವೋವಾದಿಗಳು ಮತ್ತೆ ತಮ್ಮ ಚಲನವಲನ ಆರಂಭಿಸಿದ್ದಾರೆ. ಉತ್ತರ ತೆಲಂಗಾಣದ ಗೋದಾವರಿ ದಡದಲ್ಲಿ ಮಾವೋವಾದಿಗಳ ಅಟ್ಟಹಾಸ ಹೆಚ್ಚಾಗಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದೀಗ ಆಡಳಿತ ಪಕ್ಷದ ಮೂವರು ಶಾಸಕರ ಹತ್ಯೆಗೆ ಸ್ಪಷ್ಟ ಸ್ಕೆಚ್ ಇದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಇದರಲ್ಲಿ ಮೂವರು ಶಾಸಕರಾದ ಚೆನ್ನಂ ದುರ್ಗಯ್ಯ, ಬಾಲ್ಕ ಸುಮನ್ ಮತ್ತು ಕೊರಕುಂಟಿ ಚಂದರ್ ಅವರ ಹತ್ಯೆಗೆ ಮಾವೋವಾದಿಗಳು ಸ್ಪಷ್ಟ ಸ್ಕೆಚ್ ರೂಪಿಸಿದ್ದಾರೆ ಎಂದು ಗುಪ್ತಚರ ಮೂಲಗಳು ಪತ್ತೆ ಹಚ್ಚಿವೆ. ಮೇಲಾಗಿ ಮಾವೋವಾದಿ ಪಕ್ಷದ ಪ್ರಮುಖ ನಾಯಕರು ರಾಜ್ಯ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆದರೆ, ಮೂವರು ಶಾಸಕರಲ್ಲಿ ಇಬ್ಬರು ದಲಿತ ಶಾಸಕರಾಗಿರುವುದರಿಂದ ಅವರ ಮೇಲೆ ದಾಳಿ ನಡೆದರೆ ಮಾವೋವಾದಿಗಳಿಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಹಾಗಾಗಿ ಅವರ ಮೇಲಿನ ದಾಳಿಯನ್ನು ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ.
ಮಾವೋವಾದಿಗಳ ರಾಜ್ಯ ಸಮಿತಿ ಸದಸ್ಯ ಮೈಲಾರಪು ಅದೆಲ್ಲು ಅಲಿಯಾಸ್ ಭಾಸ್ಕರ್ ಹಾಗೂ ಕೇಂದ್ರ ಸಮಿತಿ ಸದಸ್ಯ ಕಂಕನಾಳ ರಾಜಿರೆಡ್ಡಿ ತೆಲಂಗಾಣ ಪ್ರವೇಶಿಸಿದ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಖಚಿತ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಗೋದಾವರಿ ಸುತ್ತಮುತ್ತ ಕೂಂಬಿಂಗ್ ಕೈಗೊಂಡಿದ್ದಾರೆ.