ಹೊಸದಿಗಂತ ಡಿಜಿಟಲ್ ಡೆಸ್ಕ್
ವಾರಾಣಸಿ ನ್ಯಾಯಾಲಯದ ಆದೇಶದಂತೆ ಕಾಶಿಯ ಗ್ಯಾನವಾಪಿ ಮಸೀದಿಯ ಮರು ಸರ್ವೇ ಕಾರ್ಯ ಶುಕ್ರವಾರ (ಮೇ.13) ಆರಂಭವಾಗಲಿದೆ. ಮೇ.17 ರಂದು ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ನಡುವೆ ಸಂಕೀರ್ಣದ ಸಮೀಕ್ಷೆಗೆ ತಡೆ ನೀಡುವಂತೆ ಕೋರಿ ಮಸೀದಿ ಸಮಿತಿಯು ಶುಕ್ರವಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ವಾರಾಣಸಿ ಅಂಜುಮನ್ ಇಂತೇಝಾಮಿಯಾ ಮಸೀದಿಯ ಆಡಳಿತ ಸಮಿತಿಯು ಮಸೀದಿಯ ಮರು ಸರ್ವೇ ವಿಚಾರದ ಬಗ್ಗೆ ತುರ್ತು ವಿಚಾರಣೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಸೀದಿಯ ವಕೀಲರಿಗೆ ಸೂಚಿಸಿದೆ.
ವಾರಾಣಸಿ ನ್ಯಾಯಾಲಯದ ತೀರ್ಪೇನು?
ಗ್ಯಾನವಾಪಿ ಮಸೀದಿಯೊಳಗೆ ಹಿಂದೂ ದೇವರ ದೇವಾಲಯವಿದೆ ಎಂಬ ಅರ್ಜಿದಾರರ ವಾದ ಆಲಿಸಿದ್ದ ವಾರಾಣಸಿ ನ್ಯಾಯಾಲಯ ಗ್ಯಾನವಾಪಿ ಮಸೀದಿ ನೆಲಮಾಳಿಗೆ ಸೇರಿದಂತೆ ಇಡೀ ಪ್ರದೇಶವನ್ನು ಸರ್ವೆ ಮಾಡಿ ವೀಡಿಯೊಗ್ರಾಫ್ ಮಾಡಲು ಸೂಚಿಸಿತ್ತು. ಅದರಂತೆ ಮೇ. 6ರಂದು ಅಧಿಕಾರಿಗಳ ತಂಡ ಮಸೀದಿ ಸಮೀಕ್ಷೆಗೆ ತರಳಿದ್ದಾಗ ಮಸೀದಿ ಒಳಗೆ ವಿಡಿಯೋ ಮಾಡಲು ಮಸೀದಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಆದ್ದರಿಂದ ವಾರಾಣಸಿ ನ್ಯಾಯಾಲಯವು ಮೇ.16 ರಂದು ಮರು ಸರ್ವೆಗೆ ಸೂಚಿಸಿದೆ.