ಹೊಸದಿಗಂತ ವರದಿ, ಮಡಿಕೇರಿ:
ಕಳೆದ 49 ವರ್ಷಗಳಿಂದ ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಮಾತಂಡ ಮೊಣ್ಣಪ್ಪ ಅವರು ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಕೊಡವ ಜನಾಂಗದ ಹಿರಿಯಣ್ಣನಂತಿರುವ ಹಾಗೂ ಸ್ವಾತಂತ್ರ್ಯ ಪೂರ್ವದ ಸಂಸ್ಥೆಯೂ ಆಗಿರುವ ಅಖಿಲ ಕೊಡವ ಸಮಾಜಕ್ಕೆ ಮುಂದಿನ ಅಧ್ಯಕ್ಷರು ಯಾರು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ವೀರಾಜಪೇಟೆಯ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮೊಣ್ಣಪ್ಪ ಅವರು ನಿವೃತ್ತಿ ಘೋಷಿಸಿದರು. ಈ ವೇಳೆ ಅವರು ಭಾವುಕರಾದರು. ನನ್ನ ಜನಾಂಗ ನನಗೆ ಒಂದು ದೊಡ್ಡ ಜವಾಬ್ದಾರಿಯನ್ನು 49 ವರ್ಷಗಳ ಹಿಂದೆ ನೀಡಿತ್ತು. ಇದನ್ನು ದೇವರು ಮೆಚ್ಚುವ ರೀತಿ ಮಾಡಿದ್ದೇನೆ. ಬಹುಶಃ ನಾನು ಈ ಸಮಾಜದ ಅಧ್ಯಕ್ಷನಾಗಿ ಆಯ್ಕೆ ಆಗದೆ ಹೋಗದೇ ಇದ್ದಿದ್ದರೆ ಇವತ್ತು ನಾನೂ ಏನೂ ಆಗುತ್ತಿರಲಿಲ್ಲ. ಜನ ಸಾಮಾನ್ಯರಲ್ಲಿ ನಾನೂ ಕೂಡ ಒಬ್ಬನಾಗಿರುತ್ತಿದ್ದೆ ಎಂದು ನುಡಿದರು.
ನಾನು ಇವತ್ತು ಈ ಸಮಾಜಕ್ಕೆ ಏನೇ ನೀಡಿದ್ದರೂ ಅದಕ್ಕೆ ಕಾರಣ ನಮ್ಮ ಹಿರಿಯರು 1942ರಲ್ಲಿ ದೂರದೃಷ್ಟಿಯಿಂದ ಕಟ್ಟಿದ ಅಖಿಲ ಕೊಡವ ಸಮಾಜ ಹಾಗೂ ನನ್ನ ಜನಾಂಗ ಬಾಂಧವರು ಎಂದ ಅವರು, ತಕ್ಕಾಮೆಯ ನೆರಳಿನಲ್ಲಿ ಹಿರಿಯರು ಕಟ್ಟಿ ಬೆಳೆಸಿದ ಈ ಸಮಾಜವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ನಮ್ಮ ಹಿರಿಯರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಈ ಸಂಸ್ಥೆಯನ್ನು ಹುಟ್ಟು ಹಾಕಬೇಕಾದರೆ ಅವರ ಅದ್ಭುತ ಚಿಂತನೆ ಹಾಗೂ ದೂರದೃಷ್ಟಿಗೆ ನಾವು ತಲೆಬಾಗಿ ಇದನ್ನು ಮುಂದಿನ ಪೀಳಿಗೆ ಉಳಿಸಿ ಬೆಳಸಿಕೊಂಡು ಹೋಗಬೇಕಿದೆ ಎಂದರು.
ಸಭೆಯ ಮೊದಲಿಗೆ ಮಹಾಸಭೆಯಲ್ಲಿ ಉಪಸ್ಥಿತರಿದ್ದ ನಾಲ್ಕು ದೇಶ ತಕ್ಕ ಕುಟುಂಬದವರಾದ ಪರದಂಡ, ಬೊಳ್ಳೇರ, ಪಾಂಡೀರ ಹಾಗೂ ಪರುವಂಡ ಕುಟುಂಬದಲ್ಲಿ ತಲಾ ಒಬ್ಬೊಬ್ಬರನ್ನು ಕರೆದು ವೇದಿಕೆಯಲ್ಲಿ ಆಸನ ನೀಡಿ ಗೌರವ ನೀಡಲಾಯಿತು. ಕಳೆದ ಹಲವಾರು ವರ್ಷಗಳಿಂದ ಮಹಾಸಭೆಯಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಸಭಾಂಗಣ ಕಿಕ್ಕಿರಿದು ತುಂಬಿದ್ದು ವಿಶೇಷವಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ