ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಉರ್ದು ಪ್ರಾರ್ಥನೆ ಹೇಳಿಸಿದ್ದ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ.
ಮಕ್ಕಳಿಗೆ ಬೆಳಿಗಿನ ಶಾಲಾ ಪ್ರಾರ್ಥನೆ ವೇಳೆ ಉರ್ದು ಭಾಷೆಯ ಜನಪ್ರಿಯ ಪ್ರಾರ್ಥನೆ “ಲ್ಯಾಬ್ ಪೆ ಆತಿ ಹೈ ದುವಾ ಬಂಕೆ ತಮನ್ನಾ ಮೇರಿ” ಹಾಡನ್ನು ಹಾಡಿಸಲಾಗಿದೆ. ಈ ವೀಡಿಯೊ ಕ್ಲಿಪ್ ಸಾಮಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಬಲಪಂಥೀಯ ಗುಂಪುಗಳು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಣ ಇಲಾಖೆಯು ಪ್ರಾಂಶುಪಾಲರನ್ನು ಅಮಾನತುಗೊಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಯಾರನ್ನೂ ಬಂಧಿಸಿಲ್ಲ.
ಮಕ್ಕಳು “ಮೇರೆ ಅಲ್ಲಾ ಬುರೈ ಸೆ ಬಚಾನಾ ಮುಜ್ಕೋ” ಎಂಬ ಸಾಲುಗಳನ್ನು ಹಾಡುತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ. ಈ ಪ್ರಾರ್ಥನೆಯು ಸರ್ಕಾರಿ ಶಾಲೆಗಳ ದೈನಂದಿನ ಪ್ರಾರ್ಥನಾ ವೇಳಾಪಟ್ಟಿಯ ಭಾಗವಾಗಿಲ್ಲ. ಜೊತೆಗೆ ನಿರ್ದಿಷ್ಠ “ಧರ್ಮದೊಂದಿಗೆ” ಸಂಬಂಧಿಸಿರುವುದರಿಂದ ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಮೇರೆಗೆ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಹಾಡನ್ನು 1902 ರಲ್ಲಿ ಉರ್ದು ಕವಿ ಮೊಹಮ್ಮದ್ ಇಕ್ಬಾಲ್ ಬರೆದಿದ್ದಾರೆ. 2019 ರಲ್ಲೂ ಸಹ ಇಂತಹದ್ದೇ ವಿವಾದವೇರ್ಪಟ್ಟಿತ್ತು. ಇಂತಹ ಹಾಡು ಹೇಳಿಸಿದ್ದ ಪಿಲಿಭಿತ್ ಜಿಲ್ಲೆಯ ಮುಖ್ಯೋಪಾಧ್ಯಾಯರನ್ನು ಸಹ ಅಮಾನತುಗೊಳಿಸಲಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ