ಹೊಸದಿಗಂತ ವರದಿ ಬೀದರ್:
ತಾಲೂಕಿನ ಕೋಳಾರ (ಕೆ) ಗ್ರಾಮ ಪಂಚಾಯತಿಗೆ ಸರ್ಕಾರದಿಂದ ಕೋಟಿಗಟ್ಟಲೇ ಹಣ ಮಂಜೂರಾದರೂ ಸಹ ಸುಮಾರು 30 ವರ್ಷಗಳಿಂದ ಸಾರ್ವಜನಿಕ ರಸ್ತೆ ನಿರ್ಮಾಣ ಮಾಡದೇ ನಿರ್ಲಕ್ಷಿಸಲಾಗಿದೆ. ಗ್ರಾ.ಪಂ. ಅಧ್ಯಕ್ಷರು ಹಾಗು ಪಿಡಿಒ ಕೂಡ ಲಕ್ಷವಹಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರಾದ ಅಮರ ಡಿ.ಕೆ, ದಶರಥ ಝರೆಪ್ಪ, ಪಂಡಿತ, ಜೋಸೆಫ್ ಮುಂತಾದವರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೋಳಾರ (ಕೆ) ಗ್ರಾಮದ ವಾರ್ಡ ನಂಬರ 2ರ ಜನತಾ ಕಾಲೋನಿಯ ನಿವಾಸಿಗಳು, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ರಸ್ತೆ ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಪ್ರತಿವರ್ಷ ಅನುದಾನ ಮಂಜೂರು ಮಾಡಿದೆ. ಆದರೆ, ಮೂಲಭೂತ ಸೌಲಭ್ಯಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಅಧಿಕಾರಿಗಳು ನಿರ್ಭಯವಾಗಿ ನುಂಗಿ ನೀರು ಕುಡಿದಿದ್ದಾರೆ ಎಂದು ಆರೋಪಿಸಲಾಗಿದೆ.
ಕೋಳಾರ (ಕೆ) ಗ್ರಾಮದಲ್ಲಿಯೇ ಗ್ರಾಮ ಪಂಚಾಯತಿ ಕಟ್ಟಡವಿದೆ. ಆದರೂ ಗ್ರಾಮದಲ್ಲಿಯೇ 30 ವರ್ಷದಿಂದ ನೆನಗುದಿಗೆ ಬಿದ್ದಿರುವ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕೋಳಾರ (ಕೆ) ಗ್ರಾಮದ ವಾರ್ಡ ನಂಬರ 2ರ ಜನತಾ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯಗಳು ಕಲ್ಪಿಸದಿದ್ದಲ್ಲಿ ಗ್ರಾಪಂ ಕಚೇರಿಗೆ ಬೀಗ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ಜನತಾ ಕಾಲೋನಿಯ ನಿವಾಸಿಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.