ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಅಧ್ಯಕ್ಷ ಗೋಟಬಯಾ ರಾಜಪಕ್ಸ ಅವರ ಕಿರಿಯ ಸಹೋದರ ಮತ್ತು ದೇಶದ ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ ದುಬೈ ವಿಮಾನ ಹತ್ತಲು ಯತ್ನಿಸುತ್ತಿದ್ದ ಈ ವೇಳೆ ಅವರನ್ನು ವಿಮಾನ ಹತ್ತದಂತೆ ತಡೆಯಲಾಗಿದೆ.
ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಬಸಿಲ್ ಶ್ರೀಲಂಕಾ ತೊರೆಯಲು ಪ್ರಯತ್ನಿಸಿದ್ದಾರೆ. ಆದರೆ ಇತರ ಪ್ರಯಾಣಿಕರು ಭಾರಿ ಪ್ರತಿಭಟನೆ ನಡೆಸಿದ್ದರಿಂದ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಬಸಿಲ್ ಅವರಿಗೆ ದೇಶ ಬಿಡಲು ಅನುಮತಿ ನಿರಾಕರಿಸಿದ್ದಾರೆ.
ಇದರಿಂದ ಬಸಿಲ್ ವಿಮಾನ ನಿಲ್ದಾಣದಿಂದ ಹಿಂತಿರುಗಿದ್ದಾರೆ . ಈಗಾಗಲೇ ಶ್ರೀಲಂಕಾ ಅಧ್ಯಕ್ಷರು ದೇಶ ತೊರೆದು ಪರಾರಿಯಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಆದರೆ, ಅಧ್ಯಕ್ಷ ಗೋಟಬಯಾ ರಾಜಪಕ್ಸ ಇನ್ನೂ ದೇಶದಲ್ಲಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಸ್ಪಷ್ಟಪಡಿಸಿದ್ದರು. ಇದಾಗಿ ಒಂದು ದಿನದ ನಂತರ ಅಧ್ಯಕ್ಷರ ಸಹೋದರ ದೇಶ ಬಿಟ್ಟು ಹೋಗುವ ಯತ್ನ ನಡೆದಿದೆ.