ಹೊಸದಿಗಂತ ವರದಿ, ಅಂಕೋಲಾ:
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಪುಣ್ಯಕ್ಷೇತ್ರ ಗೋಕರ್ಣಕ್ಕೆ ಖಾಸಗಿ ಭೇಟಿ ನೀಡಿ ಪುರಾಣ ಪ್ರಸಿದ್ಧ ಮಹಾಗಣಪತಿ ಮತ್ತು ಮಹಾಬಲೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮಹಾಬಲೇಶ್ವರ ದೇವಾಲಯದ ಟ್ರಸ್ಟಿ ಮಹಾಬಲ ಉಪಾಧ್ಯಾಯ, ಅರ್ಚಕ ರಾಜಗೋಪಾಲ ಅಡಿ, ಪ್ರಸನ್ನ ಜೋಗ ಭಟ್ಟ, ನರಸಿಂಹ ಶಾಸ್ತ್ರಿ, ತ್ರಯಂಬಕ ಗುರುಲಿಂಗ ಮೊದಲಾದವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ದೇವಾಲಯದ ವತಿಯಿಂದ ಸಚಿವರಿಗೆ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುಣ್ಯಾಶ್ರಮಕ್ಕೆ ಭೇಟಿ ನೀಡಿದ ಸಚಿವರನ್ನು ರಾಜಗೋಪಾಲ ಅಡಿ ಅವರು ಸನ್ಮಾನಿಸಿದರು.
ಸಂಸ್ಕೃತ ಸಾಹಿತ್ಯ ಶಿಕ್ಷಣವನ್ನು ಪದವಿಪೂರ್ವ ಶಿಕ್ಷಣಕ್ಕೆ ಸಮನಾಗಿ ಪರಿಗಣಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವರು ಈ ಕುರಿತು ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.