ಹೊಸದಿಗಂತ ವರದಿ,ಬಳ್ಳಾರಿ:
ಸಾರಿಗೆ ಸಚಿವ ಬಿ.ಶ್ರಿರಾಮುಲುಗೆ ಇತಿಹಾಸವೇ ಗೊತ್ತಿಲ್ಲ, ನೆಹರು, ಗಾಂಧಿ ಕುಟುಂಬದ ಬಗ್ಗೆ ಮಾತಾಡ್ತಾರೆ, ಅವರೊಬ್ಬ ಒಬ್ಬ ಪೆದ್ದ, ಸುಮ್ಮನೇ ಏನೆನೋ ಮಾತಾಡ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಶ್ರಿರಾಮುಲು ಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ, ಅವರೊಬ್ಬ ಇನ್ನೂ ಬಚ್ಚಾ, ಸೋನಿಯಾ ಗಾಂಧಿ ಅವರು, ಅವಧಿಯಲ್ಲಿ ಬಳ್ಳಾರಿಗೆ ಕೊಟ್ಟ ಕೊಡುಗೆ ಸಾಕಷ್ಟಿದೆ. ಕಳೆದ 1972ರಲ್ಲಿ ವಿಜಯನಗರ ಉಕ್ಕು ಕಾರ್ಖಾನೆ ಮಾಡಿದ್ದು ಇಂದಿರಾ ಗಾಂಧಿ ಅವಧಿಯಲ್ಲಿ, 1999ರಲ್ಲಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಸಂಸದರಾದಾಗ ಕುಡುತಿನಿಯಲ್ಲಿ 3300ಕೋಟಿ ರೂ.ವೆಚ್ಚದಲ್ಲಿ ಪವರ್ ಪ್ಲಾಂಟ್ ನ್ನು ತಂದಿದ್ದಾರೆ, ಸೋನಿಯಾ ಗಾಂಧಿ ಅವರು ಯಾರು ಎಂಬುದು ನೆನಪಿರಲಿ ಶ್ರೀರಾಮುಲು ಎಂದು ವಾಗ್ದಾಳಿ ನಡೆಸಿದರು.
ಮೋದಿ ಅವರು ಬಳ್ಳಾರಿ ಗೆ ಒಂದು ರೂ.ಖರ್ಚು ಮಾಡಿಲ್ಲ, ನಿನ್ನಂತಹ ಪೆದ್ದನ ಜೊತೆ ಮಾತಾಡೋಕೆ ನಾನು ತಯಾರಿಲ್ಲ, ಲೂಟಿ ಹೊಡೆದಿದ್ದೇ ನಿಮ್ಮ ಸಾಧನೆ, ಇಡೀ ದೇಶದ ಜನರಿಗೆ ಗೊತ್ತಿದೆ. ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿ ಕೋಟ್ಯಾಂತರ ರೂ.ಅವ್ಯವಹಾರ ನಡೆಸಲಾಗಿದೆ. ಇದರ ಹಿಂದೆ ನಿಮ್ಮ ಬೆಂಬಲವಿದೆ, ನಾವು ಇದರ ವಿರುದ್ಧ ಹೋರಾಟ ಮಾಡಿ ಬೆಂಗಳೂರಿನಿಂದ ಬಳ್ಳಾರಿ ವರೆಗೆ ನಡೆಸಿದ ಪಾದಯಾತ್ರೆಯಿಂದಲೇ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಸಹಚರರು ಜೈಲಿಗೆ ಹೋದರು. ಕಾಂಗ್ರೆಸ್ ಬಗ್ಗೆ ಮಾತನಾಡಲು ಶ್ರೀರಾಮುಲುಗೆ ನೈತಿಕತೆಯಿಲ್ಲ, ಆಧಾರವು ಇಲ್ಲ, ಚೆರ್ಚೆಗೆ ಬನ್ನಿ ಅಂತಾರೆ, ನಾನು ನಿನ್ನಂತಹ ಪೆದ್ದನ ಜೊತೆ ಚೆರ್ಚಿಸೋಲ್ಲ, ನಮ್ಮವಿ.ಎಸ್.ಉಗ್ರಪ್ಪ ಅವರನ್ನು ಚೆರ್ಚೆಗೆ ಕಳಿಸ್ತೇನೆ ಎಂದು ಸವಾಲೆಸೆದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ರಾಹುಲ್ ಗಾಂಧ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಜನರು ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿದ್ದು, ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ, ಇದನ್ನು ಕಂಡು ಬಿಜೆಪಿ ಅವರಿಗೆ ನಡುಕ ಶುರುವಾಗಿದೆ, ಬರಯವ ಚುನಾವಣೆಯಲ್ಲಿ ಕಾಂಗ್ರೆಸ್150 ಸ್ಥಾನಗಳನ್ನು ಪಡೆದು ಸ್ವಚ್ಛ ಹಾಗೂ ಸುಂದರ ಸರ್ಕಾರ ನಡೆಸಲಿದೆ, ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿರುವುದು ರಾಜಕೀಯಕ್ಕಾಗಿ ಅಲ್ಲ, ಚುನಾವಣೆ ದೃಷ್ಟಿಯಿಂದ ಅಲ್ಲ, ಈ ಯಾತ್ರೆ ದೇಶದ ಜನರಿಗಾಗಿ, ಜನರ ಶಾಂತಿ, ನೆಮ್ಮದಿಗಾಗಿ ನಡೆಯುತ್ತಿದೆ. ರಾಜ್ಯದಲ್ಲಿರುವ ಶೇ.40 ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ತೀರ್ಮಾನಿಸಿದ್ದಾರೆ, ನಮಗೆ ಅಧಿಕಾರ ಮುಖ್ಯವಲ್ಲ, ವಾಗ್ದಾನ ನಮ್ಮದು, ವಿಶ್ವಾಸ ನಿಮ್ಮದು, ನಮ್ಮ ನಡೆ ನುಡಿ ಯಾವಾಗಲೂ ಒಂದೇ ಆಗಿರಲಿದೆ. ನಮ್ಮ ಮೇಲೆ ವಿಶ್ವಾಸ ಇಡಿ ನಿಮ್ಮ ಋಣ ತೀರಿಸ್ತೇವೆ ಎಂದರು.
ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಛತ್ತೀಸ್ ಗಡ್ ಮುಖ್ಯಮಂತ್ರಿ ಭಗೇಲಾ ಭೂಪೇಶ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಎಐಸಿಸಿ ವಕ್ತಾರ ಜಯರಾಮ್ ರಮೇಶ್, ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಎಐಸಿಸಿ ಕಾರ್ಯದರ್ಶಿ ಶ್ರೀಧರ್ಬಾಬು, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ದಿವಾಕರ್ ಬಾಬು, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸೇರಿದಂತೆ ಇತರರಿದ್ದರು.