ವಿ.ವಿ.ಸಾಗರ ಇತಿಹಾಸ ಮರುಕಳಿಸಲು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮನವಿ

ಹೊಸದಿಗಂತ ವರದಿ,ಚಿತ್ರದುರ್ಗ:

ಮೈಸೂರು ಮಹಾರಾಜರು ಕಟ್ಟಿದ ವಿ.ವಿ.ಸಾಗರದ ಇತಿಹಾಸ ಮರುಕಳಿಸಲು ದಾವಣಗೆರೆ ಭಾಗದ ಚುನಾಯಿತ ಜನಪ್ರತಿನಿಧಿಗಳು, ರೈತ ಬಾಂಧವರು, ಕಾಡಾ ಅಧ್ಯಕ್ಷರು ಮತ್ತು ಸದಸ್ಯರು ಸಹಕಾರ ನೀಡಬೇಕೆಂದು ಚಿತ್ರದುರ್ಗ ಜಿಲ್ಲೆಯ ಜನರ ಪರವಾಗಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಸೂರು ಮಹಾರಾಜರ ಕಾಲದಲ್ಲಿ ಅವರ ದೂರದೃಷ್ಟಿ ಮತ್ತು ಬಡವರ ಮೇಲಿನ ಕಾಳಜಿಯಿಂದ ವಾಣಿ ವಿಲಾಸ ಸಾಗರ ಅಣೆಕಟ್ಟು ಕಟ್ಟಿಸಿದ್ದಾರೆ. ೮೦-೯೦ ವರ್ಷಗಳ ಕೆಳಗೆ ಕೋಡಿ ಬಿದ್ದಿದ್ದು, ಆ ಸಮಯದಲ್ಲಿ ನೋಡಿದ ವ್ಯಕ್ತಿಗಳು ಈಗ ಒಬ್ಬರೂ ಇಲ್ಲ. ಅಂತಹ ಇತಿಹಾಸ ಮರುಕಳಿಸಲು ದಾವಣಗೆರೆ ಜಿಲ್ಲೆಯ ಭದ್ರ ವ್ಯಾಪ್ತಿಯ ಎಲ್ಲಾ ಜನ ಪ್ರತಿನಿಧಿಗಳು ಸಹಕಾರ ನೀಡಿದರೆ ೫ ಅಡಿ ನೀರಿನಿಂದ ಜಿಲ್ಲೆಯ ರೈತರಿಗೆ ಸಂಭ್ರಮದ ಜೊತೆಗೆ ಇತಿಹಾಸ ನಿರ್ಮಾಣವಾಗಲಿದೆ ಎಂದಿದ್ದಾರೆ.
ಕಳೆದ ೩ ತಿಂಗಳಿಂದ ೧೨೦೦ ಕ್ಯೂಸೆಕ್ಸ್ ನೀರು ಹೊರಗಡೆ ಹೋಗುತ್ತಿದೆ. ಆದರೂ ನೀರಿನ ಮಟ್ಟ ಕಡಿಮೆ ಆಗಿಲ್ಲ. ಬೇಸಿಗೆಯಲ್ಲಿ ಸಹ ನೀರಿನ ಆಹಾಕಾರವಾಗುವುದಿಲ್ಲ. ಹಾಗಾಗಿ ನಮಗೆ ೫ ಅಡಿ ನೀರು ಹರಿಸಿದರೆ ಕೋಡಿ ಬೀಳುತ್ತದೆ. ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ, ಮೊಳಕಾಲ್ಮುರು, ಚಿಕ್ಕನಾಯಕನಹಳ್ಳಿ, ಪಾವಗಡ, ಶಿರಾ ಭಾಗದ ರೈತರು ಬೆಳೆ ಹಾಳಾದರೂ ಸಹ ಅಂತರ್ಜಲ ಹೆಚ್ಚಿರುವುದರಿಂದ ಸಂತೋಷದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಕಡೂರು ಶಾಸಕರು ನೀರು ಹರಿಸಬಾರದು ಎಂದು ಹೇಳಿದ್ದಾರೆ ಎಂದು ಕೇಳಿದ್ದೇನೆ. ಆದರೆ ದಯಮಾಡಿ ಆ ರೀತಿ ಮಾಡದೆ ನೀರು ಹರಿಸಬೇಕು. ಕೇವಲ ೫ ಅಡಿ ಹರಿಸಿದರೆ ಸಾಕು. ಮತ್ತೆ ೧೨೫ ಅಡಿ ನೀರು ಯಾವಾಗ ತುಂಬುತ್ತದೆಯೋ ಯಾರೂ ಕಂಡಿಲ್ಲ. ದೊಡ್ಡತನ ತೋರಿ ನೀರು ಹರಿಸಿ ಮತ್ತು ಭದ್ರಾ ಅಣೆಕಟ್ಟು ಭಾಗದಲ್ಲಿ ಬರುವ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!