ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಂಡಿಚೇರಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸರ್ಕಾರ ಯೂನಿಫಾರ್ಮ್ಗಳು, ಸೈಕಲ್ ಹಾಗೂ ಲ್ಯಾಪ್ಟಾಪ್ ನೀಡಿಲ್ಲ ಎಂದು ಆರೋಪಿಸಿ ಪ್ರತಿಪಕ್ಷವಾದ ಡಿಎಂಕೆ ಹಾಗೂ ಕಾಂಗ್ರೆಸ್ ಶಾಸಕರು, ವಿಧಾನಸಭೆಗೆ ವಿಭಿನ್ನ ರೀತಿಯಲ್ಲಿ ಆಗಮಿಸಿ ಪ್ರತಿಭಟಿಸಿದರು.
ಶಾಸಕರು ಡಿಫರೆಂಟ್ ಎನ್ನುವಂತೆ ಶಾಲಾ ಯೂನಿಫಾರ್ಮ್, ಐಡಿ ಕಾರ್ಡ್ ಧರಿಸಿ, ಸೈಕಲ್ ಏರಿ ವಿಧಾನಸಭೆಗೆ ಆಗಮಿಸಿದ್ದರು. ಅವರ ಈ ವಿನೂತನ ಪ್ರತಿಭಟನೆ ದೇಶದ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಶಾಲೆಗಳಲ್ಲಿ ಮಧ್ಯಾಹ್ನ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟ ಕೂಡ ರುಚಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ. ಅದರೊಂದಿಗೆ ಪಾಂಡಿಚೇರಿಗೆ ರಾಜ್ಯ ಸ್ಥಾನಮಾನ ನೀಡುವ ವಿಚಾರದಲ್ಲಿ ನಿರ್ಣಯ ಮಂಡಿಸಲು ಸರ್ಕಾರಕ್ಕೆ ಮನಸ್ಸಿಲ್ಲದೆ ಇರೋದನ್ನ ವಿರೋಧಿಸಿ ವಿರೋಧಪಕ್ಷಗಳು ಶುಕ್ರವಾರದ ಕಲಾಪದಿಂದ ಹೊರನಡೆದವು.
ವಿಧಾನಸಭೆಗೆ ಶಾಲಾ ಸಮವಸ್ತ್ರ ಧರಿಸಿ, ಸೈಕಲ್ ಏರಿ ಬಂದಿದ್ದ ಡಿಎಂಕೆ ಹಾಗೂ ಕಾಂಗ್ರೆಸ್ ಶಾಸಕರು, ರಾಜ್ಯತ್ವದ ಕುರಿತು ಸರ್ಕಾರ ನಿರ್ಣಯ ಮಂಡಿಸಬೇಕೆಂದು ಒತ್ತಾಯ ಮಾಡಿದರು.
ಆದರೆ, ಇದಕ್ಕೆ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಹಾಗೂ ಅವರ ಸಚಿವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ, ಕಾಂಗ್ರೆಸ್ ಶಾಸಕರಾದ ಎಂ. ವೈದ್ಯನಾಥನ್ ಹಾಗೂ ರಮೇಶ್ ಪರಂಬತ್ ಅವರು ಸಭಾತ್ಯಾಗ ಮಾಡಿ ಹೊರನಡೆದರು. ಡಿಎಂಕೆ ಶಾಸಕರು ಕೂಡ ಇದೇ ವಿಚಾರ ಪ್ರಸ್ತಾಪ ಮಾಡುತ್ತಿದ್ದರು. ಆದರೆ, ಸ್ಪೀಕರ್ ಬೇರೆ ವಿಷಯ ಚರ್ಚಿಸಲು ಪ್ರಸ್ತಾಪಿಸಿದಾಗ ಡಿಎಂಕೆಯ ಆರು ಶಾಸಕರಾದ, ಶಿವ, ಎಎಂಎಚ್ ನಜೀಮ್, ಅನಿಬಲ್ ಕೆನೆಡಿ, ಆರ್.ಸಂಬತ್, ಆರ್.ಸೆಂಥಿಲ್ ಕುಮಾರ್ ಹಾಗೂ ಎಂ.ನಾಗತಿಯಾಗ್ರಜನ್ ಸಹ ಸಭಾತ್ಯಾಗ ಮಾಡಿದರು.