ಹೊಸದಿಗಂತ ವರದಿ,ಹುಬ್ಬಳ್ಳಿ:
ಪ್ರಧಾನಿ ಮೋದಿ ಅಂದ್ರೆ ನಂಗೆ ಬಹಳ ಇಷ್ಟ. ಅವರು ಹುಬ್ಬಳ್ಳಿಗೆ ಬರ್ತಾರೆ ಎಂದು ತಿಳಿದ ತಕ್ಷಣ ನಮ್ಮ ಪಾಲಕರಿಗೆ ಅವರನ್ನು ನೋಡಲು ಹೋಗಲು ಒತ್ತಾಯ ಮಾಡಿದೆ. ನನ್ನ ಅಜ್ಜ ನನ್ನನ್ನು ಕರೆದುಕೊಂಡು ಬಂದಿದ್ದ. ಅವರನ್ನು ಹತ್ತಿರದಿಂದ ಕಂಡ ತಕ್ಷಣ ಮನಸ್ಸು ತಡೆಯದೆ ಅವರಿಗೆ ಹೂವಿನ ಹಾರಹಾಕಲು ಹೋದೆ .ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಎಸ್ಪಿಜಿ ಮತ್ತು ಪೊಲೀಸ್ ಭದ್ರತೆ ಭೇದಿಸಿ ಹಾರ ಹಾಕಲು ಯತ್ನಿಸಿದ್ದ ತೊರವಿ ಹಕ್ಕಲದ ೧೧ವರ್ಷದ ಬಾಲಕ ಕುನಾಲ್ ಮಾಧ್ಯಮದವರ ಮುಂದೆ ಹೇಳಿದ.
ಎಂಟು ವರ್ಷದ ಹಿಂದೆ ಗೋಕುಲ ರಸ್ತೆಯಲ್ಲಿ ಪ್ರಧಾನಿ ಮೋದಿಯವರನ್ನು ದೂರದಿಂದ ನೋಡಿದ್ದೆ. ಆ ಸಮಯದಲ್ಲಿ ಕೈಕುಲಕಲು ಹೋದಾಗ ಪೊಲೀಸರು ನನ್ನನ್ನು ತಡೆದಿದ್ದರು. ಈ ಬಾರಿ ಅಜ್ಜ, ಮಾವ ಹಾಗೂ ಎರಡೂವರೆ ವರ್ಷದ ಮಗುವಿನೊಂದಿಗೆ ಬಂದಿದ್ದೆ. ಅವರ ಕಾರು ಹತ್ತಿರ ಬಂದಾಗ ಅವರ ಮೇಲಿನ ಪ್ರೀತಿ, ಗೌರವದಿಂದ ನಂಗೆ ನಿಲ್ಲಲಾಗಲಿಲ್ಲ. ತಕ್ಷಣ ಪಕ್ಕದಲ್ಲಿ ಮಗುವಿನ ಕೈಯಲ್ಲಿದ್ದ ಹಾರವೊಂದನ್ನು ಕಸಿದುಕೊಂಡು ಬ್ಯಾರಿಕೆಡ್ ಹಾರಿ ಒಳನುಗ್ಗಿದೆ ಎಂದು ಆತ ಘಟನೆ ವಿವರಿಸಿದನು.
ಮೋದಿ ಮನುಷ್ಯ ಅಲ್ಲ, ದೇವರು. ಹಾಗಾಗಿ ನಾನು ಅವರನ್ನು ನೋಡಲು ಹೋಗಿದ್ದೆ. ಅವರೊಂದಿಗೆ ಮಾತನಾಡಬೇಕು ಅಂತಿದ್ದೆ. ನಾನು ಅವರನ್ನು ನಮ್ಮನೆಗೆ ಕರೀತಿನಿ , ಅವರೊಂದಿಗೆ ಸ್ವಲ್ಪ ಸಮಯ ಕಳಿಯಬೇಕು ಎಂಬ ಆಸೆ ಇದೆ ಎಂದು ಬಾಲಕ ಕುನಾಲ್ ತನ್ನ ಆಸೆ ಬಿಚ್ಚಿಟ್ಟನು.