ಹೊಸದಿಗಂತ ವರದಿ, ಮೈಸೂರು:
ಮತ್ತೊಮ್ಮೆ ಮೋದಿ ಪ್ರಧಾನಿ ಆಗುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಖ್ಯಾತ ಹಿರಿಯ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ ಹೇಳಿದರು.
ಶುಕ್ರವಾರ ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ವಾತಾವರಣ ತುಂಬಾ ಚೆನ್ನಾಗಿದೆ. ಅಲ್ಲಿ ಮುಖ್ಯಮಂತ್ರಿ ಯೋಗಿ ರೀತಿ ಇರಬೇಕು. ನಮ್ಮಲ್ಲಿ ಆ ರೀತಿ ಸಿಎಂ ಯಾರೂ ಬಂದಿಲ್ಲ. ಸಿಎಂ ಯೋಗಿ ಆಡಳಿತವನ್ನು ಬಿಗಿಯಾಗಿ ಇಟ್ಟುಕೊಂಡಿದ್ದಾರೆ. ಹಾಗಾಗಿ ಉತ್ತರ ಭಾರತ ಭಾಗದಲ್ಲಿ ಬಿಜೆಪಿಗೆ ಗ್ಯಾರಂಟಿ ಹೇಳಬಹುದು, ಆದ್ರೆ, ಕರ್ನಾಟಕದಲ್ಲಿ ಸ್ವಲ್ಪ ಆ ಕಡೆ ಈ ಕಡೆ ಅನ್ನಿಸುತ್ತಿದೆ. ಕಾಂಗ್ರೆಸ್ ನವರು ಗ್ಯಾರೆಂಟಿ ಸ್ಕೀಂ ಇಟ್ಟುಕೊಂಡು ಅಬ್ಬರಿಸುತ್ತಿದ್ದಾರೆ. ಪರಿಸ್ಥಿತಿ ಈಗಿದ್ದರೂ ಸಹ ಬಿಜೆಪಿ ಕಳೆಪೆ ಪ್ರದರ್ಶನ ಮಾಡುವುದಿಲ್ಲ. ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳನ್ನ ಕರ್ನಾಟಕದಲ್ಲಿ ಬಿಜೆಪಿ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತಿನವರು ಆಕ್ಟಿವ್ ಹಾಗೂ ಆನೆಸ್ಟ್ ಆಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಕರ್ನಾಟಕದಲ್ಲಿ ಅಂಗಡಿ ವ್ಯಾಪಾರಿಗಳು ಅಂದ್ರೆ ಪೂರ್ಣ ಪ್ರಾಮಾಣಿಕರು ಎಂದು ಹೇಳೊಕೆ ಆಗಲ್ಲ. ಆದರೆ, ಗುಜರಾತ್ನಲ್ಲಿ ೬ ವರ್ಷದ ಮಗು ಕೈಯಲ್ಲಿ ಹಣ ಕೊಟ್ಟು ಕಳುಹಿಸಿದರೂ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಚಿಲ್ಲರೆ ಕೊಟ್ಟು ಕಳುಹಿಸುತ್ತಾರೆ. ಹಾಗೇ ಗುಜರಾತಿಗಳು ಸುಳ್ಳು ಹೇಳಲ್ಲ. ಅವರು ವ್ಯಾಪಾರಿಯಾಗಿ ಪ್ರಾಮಾಣಿಕರಾಗಿದ್ದಾರೆ. ವ್ಯಾಪಾರ ಕೇವಲ ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಮಾಡುತ್ತಾರೆ. ಅದಿಲ್ಲ ಅಂದ್ರೆ ಯಾವ ದೇಶ ಉದ್ದಾರ ಆಗೋಕೆ ಸಾಧ್ಯ ಹೇಳಿ. ಮೋದಿ ಅವರಿಗೂ ಅದೇ ಇದೆ. ಅವರು ವ್ಯಾಪಾರ ಬಿಟ್ಟು ಬರುವಾಗ ಅಲ್ಲಿದ್ದ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಬಳಿ ಇದ್ದ ೨೩ ಲಕ್ಷ ಕೊಟ್ಟು ಬಂದರು. ಅದೊಂದು ಮಾದರಿ ಆಯ್ತು. ಕೇಂದ್ರ ಸರ್ಕಾರದಲ್ಲಿ ಅದನ್ನ ಅಳವಡಿಸಿಕೊಂಡರು. ಇದನ್ನೆಲ್ಲ ಕ್ಯಾಪ್ಟಲಿಸ್ಟ್ ಅನ್ನೋಕಾಗುತ್ತಾ. ಕಾರು ವ್ಯಾಪಾರದಿಂದ ಹಣ ಬಂದು ಅಂದುಕೊಳ್ಳೋದು ಆರ್ಥಿಕತೆ ಅಲ್ಲ. ಅದರಿಂದ ಎಷ್ಟು ಕುಟುಂಬಕ್ಕೆ ನೆರವಾಯಿತು ಎನ್ನುವುದು ನಿಜವಾದ ಆರ್ಥಿಕತೆ ಎಂದು ಹೇಳಿದರು.
ಈಗಿನ ಕಾಂಗ್ರೆಸ್ ಸರ್ಕಾರದವರು ಭಾರಿ ಜೋರ್ ಇದ್ದಾರೆ. ಅವರ ನಡೆ ನುಡಿಗಳು ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಇದ್ದ ಬಿಜೆಪಿ ಸರ್ಕಾರ ಅಧಿಕಾರಗಳ ಬಗ್ಗೆ ಸಾಫ್ಟ್ ಇತ್ತು. ಆಗ ಆಧಿಕಾರಿಗಳ ದರ್ಬಾರ್ ನಡೆಯುತ್ತಿತ್ತು. ಈಗಿನ ಕಾಂಗ್ರೆಸ್ ನವರು ಭಾರಿ ಜೋರ್ ಇದ್ದಾರೆ. ಆದರೆ ಅವರ ನಡೆ ನುಡಿಗಳು ಸರಿಯಿಲ್ಲ. ಅವರ ದರ್ಪದ ಮಾತುಗಳು ಜಾಸ್ತಿಯಾಗಿದೆ. ಸೌಜನ್ಯದ ನಡವಳಿಕೆಯೇ ಇಲ್ಲ. ಅಧಿಕಾರಿದಲ್ಲಿ ಇರುವವರು ದರ್ಪದಿಂದ ಮಾತನಾಡಬಾರದು. ಕಾಂಗ್ರೆಸ್ ನಲ್ಲಿ ಬರೀ ದರ್ಪದ ಮಾತುಗಳೇ ಇದೇ ಇದು ಒಳ್ಳೆಯದಲ್ಲ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
ಸಂಸದ ಪ್ರತಾಪ್ ಸಿಂಹ ತುಂಬಾ ಕೆಲಸ ಮಾಡಿದ್ದಾರೆ. ಕೊಡಗಿನಲ್ಲಿ ಟಿಪುö್ಪ ಜಯಂತಿಗೆ ಬ್ರೇಕ್ ಹಾಕಿದ್ದಾರೆ. ಅವರ ಬಳಿ ಫೈಟಿಂಗ್ ಸ್ಪಿರೀಟ್ ಇದೆ. ಇವತ್ತು ಕೂಡ ಫೈಟಿಂಗ್ ಸ್ಪಿರೀಟ್ನಲ್ಲಿ ಇದ್ದಾರೆ. ಟಿಕೆಟ್ ಮಿಸ್ ಆದ್ರೆ ಏನಾಗುತ್ತೆ. ಸಂಸದನಾದ್ರೆ ಅಲ್ಲೇ ಕೇಂದ್ರೀಕೃತವಾಗಿರ್ತಾರೆ. ಅದನ್ನ ಬಿಟ್ಟು ಮಾಡುವುದಕ್ಕೆ ಬಹಳ ಕೆಲಸ ಇದೆ. ಅದೇ ಉತ್ಸಾಹದಲ್ಲಿ ಪ್ರತಾಪ್ ಸಿಂಹ ಇದ್ದಾರೆ. ಯದುವೀರ್ ಗೆ ಟಿಕೆಟ್ ಕೊಟ್ಟಿರೋದಕ್ಕೆ ಒಂದಕ್ಕೊoದು ವಿರೋಧ ಇಲ್ಲ. ಯದುವೀರ್ಗೆ ಟಿಕೆಟ್ ಕೊಟ್ಟಿದ್ದು ಒಳ್ಳೆಯದೇ ಆಯ್ತು. ಯದುವೀರ್ ಹಿನ್ನೆಲೆ ನೋಡಿದಾಗ ಇವರಿಗೆ ಸ್ಥಾನಮಾನ ಕೊಟ್ಟರೆ ಉತ್ತಮವಾಗಿ ನಿಭಾಯಿಸುತ್ತಾರೆ ಅನ್ಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯದುವೀರ್ ಭೇಟಿ; ಎಸ್.ಎಲ್.ಭೈರಪ್ಪನವರ ಮನೆಗೆ ಆಗಮಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಎಸ್.ಎಲ್.ಭೈರಪ್ಪರ ಕುಶಲೋಪರಿ ವಿಚಾರಿಸಿದರು. ಕೆಲಕಾಲ ಮಾತುಕತೆ ನಡೆಸಿ, ಈ ಚುನಾವಣೆಯಲ್ಲಿ ತಮಗೆ ಮತ ಚಲಾಯಿಸುವ ಮೂಲಕ ಬೆಂಬಲ ನೀಡಬೇಕೆಂದು ಕೋರಿದರು. ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ವಸಂತ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.