ಹೊಸದಿಗಂತ ವರದಿ, ಕೊಡಗು:
ಬಸ್’ನಲ್ಲಿ ಪ್ರಯಾಣಿಸುತ್ತಿದ್ದಾಗ ದೊರೆತ ರೂ.25 ಸಾವಿರ ನಗದು ಹಾಗೂ ಇತರ ದಾಖಲೆಗಳನ್ನು ವಾರಸುದಾರರಿಗೆ ಮರಳಿಸುವ ಮೂಲಕ ಟೈಲರ್ ಒಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಸಿದ್ದಾಪುರದಲ್ಲಿ ಟೈಲರ್ ವೃತ್ತಿ ನಿರ್ವಹಿಸುತ್ತಿರುವ ಅಭ್ಯತ್ ಮಂಗಲ ಒಂಟಿಯಂಗಡಿ ನಿವಾಸಿ ಎಂ.ಶಶಿ ಎಂಬವರು ಸರಕಾರಿ ಬಸ್’ನಲ್ಲಿ ಒಂಟಿಯಂಗಡಿಗೆ ಪ್ರಯಾಣ ಬೆಳೆಸುತ್ತಿದ್ದಾಗ ಸಣ್ಣ ಬ್ಯಾಗೊಂದು ದೊರೆತಿದೆ. ಇದನ್ನು ಪರಿಶೀಲಿಸಿದಾಗ ರೂ.25 ಸಾವಿರ ನಗದು, ಆಧಾರ್, ಪಾನ್ ಕಾರ್ಡ್ ಮತ್ತು ಬೈಕ್’ನ ದಾಖಲೆಗಳು ಇರುವುದು ಕಂಡು ಬಂದಿದೆ. ದಾಖಲೆಯಲ್ಲಿ ಆತೂರು ಗದ್ದೆಮನೆ ನಿವಾಸಿ ಚಿದಾನಂದ ಭಟ್ ಅವರ ಹೆಸರು ಇದ್ದುದರಿಂದ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಚಿದಾನಂದ ಭಟ್ ಅವರಿಗೆ ಶಶಿ ಹಣ ಮತ್ತು ದಾಖಲೆಯನ್ನು ಮರಳಿಸಿದರು. ಶಶಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಚಿದಾನಂದ ಭಟ್ ನಗದು ಬಹುಮಾನ ನೀಡಲು ಮುಂದಾದರಾದರೂ ಹಣವನ್ನು ಪಡೆಯದೆ ಕೃತಜ್ಞತೆ ಸಲ್ಲಿಸಿದರು.
ಟೈಲರ್ ಶಶಿ ಅವರ ಪ್ರಾಮಾಣಿಕತೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ