ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮ, ತನ್ನ ಮೂರು ವರ್ಷದ ಕಂದನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ತಾಯಿಯ ದೀಪಾ (31) ಮತ್ತು ಹೆಣ್ಣು ಮಗು ರಿಯಾ ಎಂದು ಗುರುತಿಸಲಾಗಿದೆ. ಗಂಡ ಮನೆಯಲ್ಲಿಲ್ಲದ ವೇಳೆ ವೇಲಿನಿಂದ ಮಗುವನ್ನು ಕೊಂದು ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ.
ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ತಾನೇ ಕಾರಣ ಎಂದು ಬರೆಯಲಾಗಿದೆ.
‘ಯಾರೂ ನನ್ನ ಸಾವಿಗೆ ಕಾರಣರಲ್ಲ. ಜೀವನದ ಜಂಜಾಟ ನನಗೆ ಸಾಕಾಗಿದೆ. ನನ್ನನ್ನು ಕ್ಷಮಿಸು ಅಮ್ಮ ಮತ್ತು ದಿವ್ಯಾ. ಲವ್ ಯೂ ಶೋನಾ,’ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಿನ್ನೆ ಸಂಜೆ ಪೋಷಕರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು ದೀಪಾ. ಅದಾದ ನಂತರ ಸಂಜೆ ಕೆಲಸ ಮುಗಿಸಿ ರಾತ್ರಿ 9 ಗಂಟೆಗೆ ಗಂಡ ಆದರ್ಶ್ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ.
ಆತ್ಮಹತ್ಯೆಗೆ ಅನಾರೋಗ್ಯ ಸಮಸ್ಯೆ ಕಾರಣವಾ ಅಥವಾ ಕೌಟುಂಬಿಕ ಸಮಸ್ಯೆ ಏನಾದರೂ ಇತ್ತಾ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.
ಮದುವೆಯಾಗಿ ಸುಮಾರು ನಾಲ್ಕೂವರೆ ವರ್ಷವಾಗಿತ್ತು. ಗಂಡ ಆದರ್ಶ್ ಉಡುಪಿ ಮೂಲದವನಾಗಿದ್ದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಯಾವುದೇ ಆರ್ಥಿಕ ಸಮಸ್ಯೆ ಅವರಿಗಿರಲಿಲ್ಲ ಎಂದು ಕುಟುಂಬ ಮೂಲಗಳು ಪೊಲೀಸರಿಗೆ ಮಾಹಿತಿ ನೀಡಿವೆ. ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ತಿಳಿದಿದೆ.