ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮನೆ ಮೇಲೆ ಚಪ್ಪಲಿ, ದೊಣ್ಣೆ ಮತ್ತು ಕಲ್ಲು ಎಸೆದ ಆರೋಪದಡಿಯಲ್ಲಿ 110 ಎಂಎಸ್ಆರ್ಟಿಸಿ ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ದಾಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ವಕೀಲ ಗುಣರತ್ನ ಸದಾವರ್ತೆ ಸೇರಿದಂತೆ ಒಟ್ಟು 110 ಆರೋಪಿಗಳನ್ನು ಶನಿವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳ ಪೈಕಿ 109 ಮಂದಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದಾವರ್ತೆಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ 5ತಿಂಗಳಿಂದ ಮಹಾರಾಷ್ಟ್ರ ಸಾರಿಗೆ ನೌಕರರು ಧರಣಿ ನಡೆಸುತ್ತಿದ್ದರು. ಇದೇ ವೇಳೆ ಏಪ್ರಿಲ್ 22ರೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ನೋಟೀಸ್ ಹೊರಡಿಸಿದೆ. ಇದರಿಂದ ರೊಚ್ಚಿಗೆದ್ದ ನೌಕರರು ಶರದ್ ಪವಾರ್ ನಿವಾಸದ ಮೇಲೆ ಕಲ್ಲು, ದೊಣ್ಣೆಗಳಿಂದ ದಾಳಿ ನಡೆಸಿದ್ದರು.
ಈ ಪ್ರಕರಣದಲ್ಲಿ ಪೊಲೀಸರ ಪರ ವಕೀಲರಾಗಿ ರಾಜ್ಯ ಸರ್ಕಾರ ಪ್ರದೀಪ್ ಘರತ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿದೆ. ಸದಾವರ್ತೆ ಅವರನ್ನು ಕಸ್ಟಡಿಗೆ ನೀಡುವಂತೆ ಘರತ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ವಕೀಲ ಸದಾವರ್ತೆ ಗಲಭೆಕೋರರನ್ನು ಪ್ರಚೋದಿಸಿದ್ದಾರೆ ಎಂದು ಘರತ್, ನ್ಯಾಯಾಲಯಕ್ಕೆ ವಿಡಿಯೋ ದೃಶ್ಯಾವಳಿಯನ್ನೂ ಸಲ್ಲಿಸುವುದಾಗಿ ಹೇಳಿದ್ದಾರೆ. ಮೊದಲು 104 ಮಂದಿಯನ್ನು ಬಂಧಿಸಿ ನಂತರ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ