ಹೊಸದಿಗಂತ ವರದಿ,ಮದ್ದೂರು:
ಗಂಡಸ್ತನದ ಮಾತಿನ ವಿಚಾರದಲ್ಲಿ ಎರಡು ಗುಂಪಿನ ನಡುವೆ ಡಾಬಾವೊಂದರಲ್ಲಿ ನಡೆದಿದ್ದ ಸಾಗರ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಮದ್ದೂರು ಗ್ರಾಮಾಂತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕೊಪ್ಪ ಹೋಬಳಿ, ಹುರುಗಲವಾಡಿ ಗ್ರಾಮದ ಶಿವರಾಜ್ ಪುತ್ರ ಎಚ್. ಎಸ್. ಗಿರೀಶ್, ಸೋಮನಹಳ್ಳಿಯ ರಾಮಕೃಷ್ಣಪ್ಪನ ಪುತ್ರ ಎಚ್.ಆರ್. ರಾಕೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣದ ಎರಡನೇ ಆರೋಪಿ ನಂಬಿನಾಯಕನಹಳ್ಳಿಯ ಪ್ರತಾಪ್ ಅಲಿಯಾಸ್ ಪ್ರದೀಪ್ ತಲೆಮರೆಸಿಕೊಂಡಿದ್ದುಘಿ, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರಿನ ಖಾಸಗೀ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸಾಗರ್ ಕಳೆದ ಮೇ. 8ರಂದು ಸ್ನೇಹಿತನಾದ ಕುಂಠನಹಳ್ಳಿಯ ಪ್ರತಾಪ್ ಹುಟ್ಟುಹಬ್ಬ ಆಚರಿಸಲು ಕೊಪ್ಪದ ಸಿಂಚನಾ ಡಾಬಾಕ್ಕೆ ಬಂದಿದ್ದರು. ಕೇಕ್ ಕತ್ತರಿಸಿದ ನಂತರ ಊಟ ಮಾಡಿ ಹೊರಡುವ ವೇಳೆ ಕೊಲೆಯಾದ ಸಾಗರ್ ಹಾಗೂ ಆರೋಪಿ ರಾಕೇಶ್ ಗುಂಪಿನ ನಡುವೆ ಕಳೆದ ಮೂರು ತಿಂಗಳ ಹಿಂದೆ ಕೊಪ್ಪ ಗ್ರಾಮದವರು ಗಂಡಸ್ತನ ಇಲ್ಲ ಎಂಬ ವಿಚಾರವಾಗಿ ಜಗಳ ನಡೆದಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಸಾಗರ್ನ ಕೊಲೆಗೆ ಯೋಜನೆ ರೂಪಿಸಿದ್ದರು.
ಈ ವೇಳೆ ಡಾಬಾದಲ್ಲಿ ಊಟ ಮಾಡಲು ಬಂದ ಸಾಗರ್ಗೆ ಬೀಯರ್ ಬಾಟಲ್ನಿಂದ ಅಟ್ಯಾಕ್ ಮಾಡಿ ಹಲ್ಲೆ ಮಾಡಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಆರೋಪಿಗಳು ಡ್ರಾಗರ್ನಿಂದ ಇರಿದ ಪರಿಣಾಮ ಸಾಗರ್ ಮೃತಪಟ್ಟಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮದ್ದೂರು ಗ್ರಾಮಾಂತರ ಠಾಣೆಯ ಪ್ರಬಾರ ಇನ್ಸ್ಪೆಕ್ಟರ್ ಕೆ.ಎನ್. ಹರೀಶ್ ಆರೋಪಿಗಳ ಪತ್ತೆಗೆ ಎಸ್ಪಿ ಎನ್. ಯತೀಶ್ ಅವರ ಸೂಚನೆ ಮೇರೆಗೆ ತಂಡ ರಚನೆ ಮಾಡಲಾಗಿತ್ತು.
ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್ ಮಾರ್ಗದರ್ಶನದಲ್ಲಿ ವಿಶೇಷ ತಂಡದ ಕೊಪ್ಪ ಪಿಎಸ್ಐ ಆರ್.ಬಿ. ಸಾಹೇಬ್ಗೌಡ, ಸಿಬ್ಬಂದಿಗಳಾದ ಪ್ರಭುಸ್ವಾಮಿ, ರಿಯಾಜ್ಪಾಷ, ವಿಠಲ್ ಜೆ. ಕರಿಗಾರ್, ಕರಿಗಿರಿಗೌಡ, ಅನಿಲ್ಕುಮಾರ್, ಪ್ರಮೋದ್, ನಟರಾಜ್, ಎಸ್. ಕಿಶೋರ್ ಅವರುಗಳು ಕಾರ್ಯಾಚರಣೆ ನಡೆಸಿ ಮೇ. 9ರಂದು ಚನ್ನಪಟ್ಟಣದ ಬಸ್ ನಿಲ್ದಾಣದ ಹತ್ತಿರ ಪ್ರಥಮ ಆರೋಪಿ ಗಿರೀಶ್, ಮೂರನೇ ಆರೋಪಿ ರಾಕೇಶ್ ಅವರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರನ್ನು ಜೆಎಂಎ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.