ಹೊಸದಿಗಂತ ವರದಿ ಕೊಪ್ಪಳ:
ನೀತಿ ಆಯೋಗ ಬಿಡುಗಡೆ ಮಾಡಿದ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ (ಎಬಿಪಿ)ದ ಪಟ್ಟಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿ ತಾಲೂಕು ದಕ್ಷಿಣ ಭಾರತದಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದು, ಸಂಸದ ಸಂಗಣ್ಣ ಕರಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೂಲಸೌಲಭ್ಯ, ಶಿಕ್ಷಣ, ಕೃಷಿ ಸೇರಿ ವಿವಿಧ ಮಾನದಂಡಗಳ ಆಧಾರದ ಮೇಲೆ ರ್ಯಾಂಕಿಂಗ್ ನೀಡಲಾಗಿದ್ದು, ಮೊದಲ ಸ್ಥಾನ ಪಡೆದ ಮಸ್ಕಿ ತಾಲೂಕು 1.5 ಕೋಟಿ ರು. ಪ್ರೋತ್ಸಾಹಧನಕ್ಕೆ ಭಾಜನವಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿಯು ಅಶೋಕನ ಶಾಸನದಿಂದ ಪ್ರಸಿದ್ಧಿ ಪಡೆದಿತ್ತು. ದಕ್ಷಿಣ ಭಾರತದಲ್ಲೇ ಅಶೋಕನ ಆಡಳಿತ ಮಾದರಿಯಾದಂತೆ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ವಿಶ್ವದ ಮನ್ನಣೆ ದೊರಕಿದೆ ಎಂದರು.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಮಯದಲ್ಲೇ ಹನುಮನ ನಾಡು ಕೊಪ್ಪಳ ಲೋಕಸಭಾ ಕ್ಷೇತ್ರದ ಮಸ್ಕಿ ಅತ್ಯುತ್ತಮ ಸಾಧನೆ ಮಾಡಿದೆ. ಸಾಮ್ರಾಟ್ ಅಶೋಕನಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಮರಾಜ್ಯ ನಿರ್ಮಾಣ ಮಾಡುತ್ತಿದ್ದಾರೆ ಎಂದು ಪ್ರಧಾನಿಯನ್ನು ಬಣ್ಣಿಸಿದರು.