ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಹಿಂದು ಎಂದು ಸುಳ್ಳು ಹೇಳಿ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಮುಸ್ಲಿಂ ವ್ಯಕ್ತಿಯು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ನ್ಯಾಯಾಲಯ ತಳ್ಳಿಹಾಕಿದೆ. ಆತ ಬಾಲಕಿಗೆ ತಾನು ಹಿಂದು ಎಂದು ಆಮಿಷವೊಡ್ಡಿ ಆಕೆಯನ್ನು ಇಸ್ಲಾಂಗೆ ಮತಾಂತರಿಸಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಈ ಕುರಿತು ಆದೇಶನೀಡಿರುವ ಕೋರ್ಟ್ ಜಾಮೀನಿಗೆ ಅರ್ಜಿ ಸಲ್ಲಿಸಿರುವ “ಅನ್ವರ್ ಅಲಿ ಎಂಬಾತನು ಈಗಾಗಲೇ ಮದುವೆಯಾಗಿದ್ದರೂ ತನ್ನನ್ನು ತಾನು ʼರಾಜ್ʼ ಎಂದು ಪರಿಚಯಿಸಿಕೊಂಡು ಸಾಮಾಜಿಕ ಮಾಧ್ಯಮದ ಮೂಲಕ ಅಕೆಯೊಂದಿಗೆ ಪ್ರಣಯ ಸಂಬಂಧ ಬೆಳೆಸಿಕೊಂಡನು. ನಂತರ ತನ್ನೊಂದಿಗೆ ನಿಖಾ ಮಾಡಿಕೊಳ್ಳಲು ಒತ್ತಾಯಿಸಿದ್ದಲ್ಲದೇ ಅವಳನ್ನು ಮುಸ್ಲಿಂ ಧರ್ಮಕ್ಕೆ ಪರಿವರ್ತಿಸಲು ಪ್ರಯತ್ನಿಸಿದನು” ಎಂದು ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ಪೀಠವು ಅತನ ಜಾಮೀನು ಅರ್ಜಿ ತಿರಸ್ಕರಿಸಿದ್ದು “ಆರೋಪಿ-ಅರ್ಜಿದಾರನು ತನ್ನ ಹೆಂಡತಿ ಮತ್ತು ಕುಟುಂಬಕ್ಕೆ ದ್ರೋಹ ಮಾಡಿದ್ದಲ್ಲದೆ, ತನ್ನನ್ನು ನಂಬಿದ ಅಮಾಯಕ ಹುಡುಗಿಯ ನಂಬಿಕೆಗೆ ಮೋಸವೆಸಗಿದ್ದಾನೆ ಅಲ್ಲದೇ ತನ್ನ ಸುಳ್ಳು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ಆದ್ದರಿಂದ, ಅಪರಾಧದ ಸ್ವರೂಪ, ಅಲಿಯ ವೈವಾಹಿಕ ಸ್ಥಿತಿ, ಮತ್ತು ಅವನು ಅನ್ವರ್ ಅಲಿಯಾಗಿದ್ದರೂ, ಹುಡುಗಿಗೆ ‘ರಾಜ್’ ಎಂದು ಪರಿಚಯಿಸಿಕೊಂಡ ಸಂಗತಿಯನ್ನು ಗಮನಿಸಿ ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಲು ಸಾಧ್ಯವಿಲ್ಲ” ಎಂದು ಹೇಳಿದೆ ಮತ್ತು ತ್ವರಿತವಾಗಿ ಪ್ರಕರಣದ ವಿಚಾರಣೆ ನಡೆಸುವಂತೆ ಆದೇಶ ನೀಡಿದೆ.