ಹೊಸದಿಗಂತ ವರದಿ ವಿಜಯನಗರ:
ಯೋಗ ಸರ್ವರೋಗಕ್ಕೂ ರಾಮಬಾಣ, ಪ್ರತಿಯೊಬ್ಬರೂ ನಿತ್ಯ ನಿಗದಿತ ಅವಧಿಯಲ್ಲಿ ಯೋಗ ಮಾಡಲು ಮುಂದಾಗಬೇಕು ಎಂದು ಪ್ರವಾಸೋದ್ಯಮ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಕರೆ ನೀಡಿದರು. ವಿಶ್ವಪ್ರಸಿದ್ಧ ಹಂಪಿಯ ಉಗ್ರ ನರಸಿಂಹ ದೇಗುಲ ಆವರಣದ ಬಡವಿಲಿಂಗದ ಬಳಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಯೋಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಗ ಮಾಡುವುದರಿಂದ ಆವರಿಸುವ ನಾನಾ ಕಾಯಿಲೆಗಳು ದೂರವಾಗಲಿವೆ. ಯೋಗ ಶಿಕ್ಷಕರಿಂದ ತರಬೇತಿ ಪಡೆದು ನಿತ್ಯ ಯೋಗಾಭ್ಯಾಸ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ವಿಶೇಷವಾಗಿ ಮಕ್ಕಳು ಯೋಗಾಭ್ಯಾಸ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಲಿದೆ, ಮಾನಸಿಕ ಚೈತನ್ಯ ಮೂಡಲಿದೆ ಎಂದರು.
ಹರಿಹರ ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಮಾತನಾಡಿ, ಯೋಗ ಮಾಡುವುದರಿಂದ ಆರೋಗ್ಯ ಸದೃಢವಾಗಿರಲಿದೆ. ಉತ್ತಮ ಆರೋಗ್ಯಕ್ಕಾಗಿ ಜನರು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದು, ನಿಗದಿತ ಅವಧಿಯಲ್ಲಿ ಯೋಗ ಮಾಡುವುದರಿಂದ ಎಲ್ಲ ರೀತಿಯಲ್ಲೂ ಅನುಕೂಲವೇ ಹೊರತು, ಇದರಿಂದ ಯಾವುದೇ ಹಾನಿಯಿಲ್ಲ,.
ನರೇಂದ್ರ ಮೋದಿಜೀ ಅವರು ಪ್ರಧಾನ ಮಂತ್ರಿಯಾದ ಬಳಿಕ ಯೋಗಕ್ಕೆ ಹೆಚ್ಚು ಪ್ರಾಧಾನ್ಯತೆ ಸಿಕ್ಕಿದೆ, ಇಡೀ ವಿಶ್ವಕ್ಕೆ ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ಒಳ್ಳೆಯ ಸಂದೇಶ ರವಾನಿಸಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವ ಮೂಲಕ ಮೋದಿಜೀ ಅವರು ಇತಿಹಾಸ ಸೃಷ್ಟಿಸಿದ್ದಾರೆ ಎಂದರು.