ಹೀಗೆ ಇಬ್ಬರು ಸ್ನೇಹಿತರ ಬೀಚ್ ಬಳಿ ವಾಕ್ ಮಾಡ್ತಾ ಇದ್ರು. ಇಬ್ಬರು ಸಣ್ಣ ವಯಸ್ಸಿನಿಂದಲೂ ಸ್ನೇಹಿತರೇ. ಬೀಚ್ನಲ್ಲಿ ವಾಕ್ ಮಾಡ್ತಾ ಹೀಗೆ ಹಳೆಯದನ್ನೆಲ್ಲಾ ಮೆಲುಕು ಹಾಕ್ತಾ ಇದ್ದರು. ಹಿಂದಿನ ಒಂದು ಘಟನೆ ಮಾತಿನ ಮಧ್ಯೆ ನೆನಪು ಬಂತು.
ಅಂದು ನೀನು ಮಾಡಿದ್ದು ನೆನೆಸಿಕೊಂಡ್ರೆ ಈಗಲೂ ಕೋಪ ಬರುತ್ತದೆ. ನನ್ನ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ ಆ ಹುಡುಗಿಗೆ ಸಹಾಯ ಮಾಡೋಕೆ ಹೋಗಿದ್ದೆ ಎಂದು ಸ್ನೇಹಿತ ಹೇಳಿದೆ. ಆಕೆ ಬರೀ ಹುಡುಗಿ ಅಷ್ಟೇ ಅಲ್ಲ ನನ್ನ ಎಕ್ಸ್ ಗರ್ಲ್ಫ್ರೆಂಡ್ ನೆನಪಿರಲಿ ಎಂದು ಇನ್ನೊಬ್ಬಾತ ಹೇಳಿದ.
ಹೀಗೆ ಮಾತಿಗೆ ಮಾತು ಬೆಳೆಯಿತು, ಒಬ್ಬ ಸ್ನೇಹಿತ ಸಿಟ್ಟಿನಲ್ಲಿ ಕಪಾಳಕ್ಕೆ ಬಾರಿಸಿದ. ಇನ್ನೊಬ್ಬಾತ ಸಿಟ್ಟಾಗಲಿಲ್ಲ. ಸುಮ್ಮನಾದ. ಅಲ್ಲೇ ಕುಳಿತುಕೊಂಡು, ಇಂದು ನನ್ನ ಸ್ನೇಹಿತ ನನ್ನ ಕೆನ್ನೆಗೆ ಬಾರಿಸಿದ ಎಂದು ಮರಳ ಮೇಲೆ ಬರೆದ.
ಇನ್ನೊಬ್ಬಾತ ಇದನ್ನು ಗಮನಿಸಿದ ಆದರೆ ಸಿಟ್ಟಲ್ಲಿ ಇದ್ದ ಅಲ್ವಾ? ಏನೂ ವಿಚಾರಿಸದೇ ಮುಂದೆ ಹೋದ, ಹೀಗೆ ಅವರ ಟ್ರಿಪ್ ಮುಂದಕ್ಕೆ ಸಾಗಿತು. ಮತ್ತೆ ಮುಂದೊಮ್ಮೆ ಅವರು ಫಾಲ್ಸ್ನಲ್ಲಿ ಆಟವಾಡುತ್ತಿದ್ದರು. ಆಗ ಹೊಡೆಸಿಕೊಂಡಿದ್ದ ಸ್ನೇಹಿತ ಕಾಲು ಜಾರಿ ಬೀಳುತ್ತಿದ್ದ. ತಕ್ಷಣ ಮತ್ತೊಬ್ಬ ಸ್ನೇಹಿತ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡ ಅವನ ಪ್ರಾಣ ಉಳಿಸಿದ.
ಆಗ ಆ ಸ್ನೇಹಿತ ಕಲ್ಲಿನಮೇಲೆ ಕೆತ್ತಿದ, ಇಂದು ನನ್ನ ಸ್ನೇಹಿತ ನನ್ನ ಜೀವ ಉಳಿಸಿದ ಎಂದು. ಈಗ ಸ್ನೇಹಿತನಿಗೆ ಆತ ಬೀಚ್ನಲ್ಲಿ ಬರೆದಿದ್ದು ನೆನಪಾಯ್ತು. ಅಂದು ಹೊಡೆದಾಗ ಮರಳಿನ ಮೇಲೆ ಬರೆದೆ, ಇಂದು ಉಳಿಸಿದಾಗ ಕಲ್ಲಿನ ಮೇಲೆ ಬರೆದೆ ಇದಕ್ಕೇನು ಅರ್ಥ ಎಂದು ಕೇಳಿದ. ಅದಕ್ಕೆ ಸ್ನೇಹಿತ ಹೇಳಿದ, ಕಹಿ ಘಟನೆಗಳನ್ನು ಮರಳ ಮೆಲೆ ಬರೆಯುತ್ತೇನೆ ಯಾಕಂದ್ರೆ ಅದು ಒಂದು ಅಲೆಗೆ ಅಳಿಸೇ ಹೋಗುತ್ತದೆ. ಸಿಹಿ ಘಟನೆಗಳನ್ನು ಕಲ್ಲಿನ ಮೇಲೆ ಬರೆದೆ ಯಾಕಂದ್ರೆ ಅದು ಸದಾ ಇರಲಿ ಎಂದು ಆಶಿಸುತ್ತೇನೆ ಎಂದ!
ಉಫ್ ನಮ್ಮ ಕಥೆ ಮುಗೀತು, ಇದರಿಂದ ನಿಮಗೇನು ಅರ್ಥ ಆಯ್ತು? ಜೀವನದಲ್ಲಿ ಕಹಿ, ಸಿಹಿ ಘಟನೆ ಎರಡೂ ಬರದೇ ಹೋದ್ರೆ ಅದೆಂಥಾ ಜೀವನ? ಕಹಿ ಘಟನೆಗಳನ್ನು ಮರಳಿನ ಮೇಲೆ ಬರೆದು ಮರೆತುಬಿಡಿ, ಸಿಹಿ ಘಟನೆಗಳನ್ನು ಕಲ್ಲಿನಲ್ಲಿ ಕೊರೆದು ಖುಷಿ ಪಡಿ. ಈ ಕಲ್ಲು ಹಾಗೂ ಮರಳು ಎರಡೂ ನಿಮ್ಮ ಮನಸ್ಸಿನಲ್ಲಿಯೇ ಇದೆ. ಯಾವುದರ ಮೇಲೆ ಯಾವುದನ್ನು ಬರೆಯುತ್ತೀರಿ ಅದರ ಮೇಲೆ ನಿಮ್ಮ ನೆಮ್ಮದಿ ನಿರ್ಧರಿಸಿದೆ.