ದಿಗಂತ ವರದಿ ವಿಜಯಪುರ:
ಉಕ್ರೇನ್- ರಷ್ಯಾ ಭೀಕರ ಯುದ್ಧ ಪೀಡಿತ ಖಾರ್ಕಿವ್ ನಗರದಿಂದ ಸುರಕ್ಷಿತವಾಗಿ ಎಂಬಿಬಿಎಸ್ ವಿದ್ಯಾರ್ಥಿನಿ ಸುಚಿತ್ರಾ ಕವಡಿಮಟ್ಟಿ ವಿಜಯಪುರದ ನಿವಾಸಕ್ಕೆ ಆಗಮಿಸಿದ್ದು, ಪಾಲಕರಲ್ಲಿ ಸಂತಸ ಮನೆಮಾಡಿದೆ. ಇಲ್ಲಿನ ಗಣೇಶ ನಗರ ಬಳಿಯ ಗುರುಪಾದೇಶ್ವರ ನಗರದ ನಿವಾಸಿ ಮಲ್ಲನಗೌಡ ಕವಡಿಮಟ್ಟಿ ಹಾಗೂ ಕಮಲಾ ಕವಡಿಮಟ್ಟಿ ಅವರ ಪುತ್ರಿ ಸುಚಿತ್ರಾ, ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ್ದು, ಆರತಿ ಬೆಳಗಿ, ಸಿಹಿ ತಿನ್ನಿಸಿ ಬರಮಾಡಿಕೊಂಡರು.
ಈ ಸಂದರ್ಭ ಸುಚಿತ್ರಾ ಯುದ್ಧ ಪ್ರದೇಶದ ತಮ್ಮ ಅನುಭವ ಹಂಚಿಕೊಂಡು, ನನ್ನ ತಾಯ್ನಾಡಿಗೆ ಬಂದಿರುವುದು ನನ್ನ ಪುನರ್ ಜನ್ಮವಾಗಿದೆ. ನಾನು ಕನಸ್ಸು, ಮನಸ್ಸಿನಲ್ಲೂ ಇಂಥಹ ಭೀಕರ ಯುದ್ಧವನ್ನು ಕಂಡಿರಲಿಲ್ಲ. ಉಕ್ರೇನ್ ನಲ್ಲಿ ಏಕಾಏಕಿ ಯುದ್ಧ ಆರಂಭಗೊಳ್ಳುತ್ತಿದ್ದಂತೆ, ಖಾರ್ಕಿವ್ ನಗರವಿಡೀ ನರಕವಾಯಿತು. ಐದು ದಿನಗಳ ವರೆಗೆ ನಾವು ಮನೆ ತೊರೆದು, ಬಂಕರ್ ನಲ್ಲಿ ಅಡಗಿ ಕುಳಿತೆವು. ಸುತ್ತಲೂ ನಿರಂತರ ಬಾಂಬ್ ಬೀಳುತ್ತಲೇ ಇದ್ದಾಗ, ನಮ್ಮ ಜೀವ ಕೈಯಲ್ಲಿ ಹಿಡಿದು ನಲಗುವಂತಾಗಿತ್ತು. ಅದು ನೆನಸಿಕೊಂಡರೆ ಈಗಲೂ ಮೈಜುಮ್ ಎನ್ನುತ್ತೆ. ಯುದ್ಧದ ವೇಳೆ ಸಿಲುಕಿದ್ದಾಗ, ಊಟಕ್ಕೂ, ನೀರಿಗೂ ಪರದಾಡುವಂತಾಗಿತ್ತು. ಐದು ದಿನಗಳ ಕಾಲ ಕೇವಲ ಎರಡು ಬ್ರೇಡ್, ಹನಿ ನೀರು ಕುಡಿದೇ ಜೀವ ಭೀತಿಯಲ್ಲೇ ಬದುಕುವಂತಾಗಿತ್ತು. ನಮ್ಮನ್ನು ಸುರಕ್ಷಿತವಾಗಿ ಕರೆತಂದ, ಭಾರತ ಸರ್ಕಾರಕ್ಕೂ ಹಾಗೂ ನಮಗೆ ನೆರವು ನೀಡಿದ ಎಲ್ಲರಿಗೂ ಧನ್ಯವಾದ. ನನ್ನ ಮುಂದಿನ ವ್ಯಾಸಂಗಕ್ಕೆ ನಮ್ಮ ದೇಶದಲ್ಲೇ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.