ಹೊಸದಿಗಂತ ವರದಿ ಮೈಸೂರು:
ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಆಹಾರ ವ್ಯರ್ಥವಾಗುತ್ತಿದೆ. ತಿನ್ನುವ ಹಕ್ಕು ನಮಗಿದೆ ಆದರೆ ಬಿಸಾಡುವ ಹಕ್ಕು ನಮಗಿಲ್ಲ. ಆಹಾರವನ್ನು ವ್ಯರ್ಥ ಮಾಡಬೇಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದರು.
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಭಾನುವಾರ ಮೈಸೂರು ನಗರದ ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ದಸರಾ ಆಹಾರ ಮೇಳ ಕಾರ್ಯಕ್ರಮವನ್ನು ಹಾಲು ಉಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇಂದು ಆಹಾರ ಮೇಳದಲ್ಲಿ 150 ಮಳಿಗೆಗಳನ್ನು ತೆರೆಯಲಾಗಿದೆ. ಆಹಾರವನ್ನು ಯಾರು ಕೂಡ ವ್ಯರ್ಥ ಮಾಡಬಾರದು. ಉಪಯುಕ್ತರು ಆಹಾರವನ್ನು ಬಳಸಿಕೊಳ್ಳಿ ಹೆಚ್ಚಿನ ರೀತಿ ಆಹಾರ ಪೋಲಾಗುವುದನ್ನು ತಪ್ಪಿಸಿ ಎಂದರು.
ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಆಹಾರ ವ್ಯರ್ಥವಾಗುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ಸರ್ಕಾರದ ವತಿಯಿಂದ ಈ ವಿಚಾರದ ಕುರಿತು ಕ್ರಮವನ್ನು ಕೈಗೊಳ್ಳಲಾಗುವುದು. ಮದುವೆ ಮನೆಗಳು ಮತ್ತು ಶುಭ ಸಮಾರಂಭಗಳಲ್ಲಿ ಹಾಗೂ ಕೆಲವು ಹೋಟೆಲ್ ಗಳಲ್ಲಿ ಆಹಾರ ವ್ಯರ್ಥವಾಗುತ್ತಿದೆ. ಈ ರೀತಿ ಆಹಾರವನ್ನು ವ್ಯರ್ಥ ಮಾಡಬಾರದು.
ಮುಂದಿನ ದಿನಗಳಲ್ಲಿ ಆಹಾರ ವ್ಯರ್ಥವಾಗದಂತೆ ಸರ್ಕಾರದಿಂದ ನಿಯಮಾವಳಿಗಳನ್ನು ರೂಪಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಪರಿಷತ್ ಸದಸ್ಯರಾದ ಡಿ ತಿಮ್ಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ , ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತಾ ದಿನೇಶ್. ಮತ್ತು ಪ್ರಮುಖರು ಭಾಗವಹಿಸಿದ್ದರು.