ಹೊಸದಿಗಂತ ವರದಿ, ಮೈಸೂರು
ರಾಜ್ಯದಲ್ಲಿರುವ ಮಸೀದಿಗಳಲ್ಲಿ ದಿನ ನಿತ್ಯ ಐದು ಬಾರಿ ಕೂಗುವ ಆಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಸುಪ್ರಭಾತ ಮೊಳಗಿಸುವ ಸಮರ ಸೋಮವಾರ ಆರಂಭವಾಗಿದೆ. ಸಾಂಸ್ಕ್ರತಿಕ ನಗರಿ ಮೈಸೂರಿನ ಶಿವರಾಂಪೇಟೆಯ ಶ್ರೀ ತ್ರಿಪುರ ಭೈರವಿ ಮಠದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಧ್ವನಿವರ್ಧಕ ಆನ್ ಮಾಡಿ, ಹನುಮಾನ್ ಚಾಲಿಸಾ ಪಠಣೆಗೆ ವಿದ್ಯುಕ್ತ ಚಾಲನೆ ನೀಡಿದರು.
ಅವರಿಗೆ ಮೈಸೂರಿನ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದರು. ಇದೇ ವೇಳೆ ಪ್ರಮೋದ್ ಮುತಾಲಿಕ್ ಅವರು ಕಾರ್ಯಕರ್ತರು ಹಾಗೂ ಸ್ವಾಮೀಜಿ ಜೊತೆ ದೇವಸ್ಥಾನದಲ್ಲಿ ಶ್ರೀರಾಮ ಹಾಗೂ ಈಶ್ವರನ ಬಗ್ಗೆ ಭಜನೆ ಮಾಡಿದರು. ಬಳಿಕ ಮೈಸೂರಿನ ತ್ಯಾಗರಾಜ ರಸ್ತೆಯ ಶ್ರೀ ಚಿಕ್ಕಾಂಜನೇಯ ದೇವಸ್ಥಾನಕ್ಕೂ ಭೇಟಿ ನೀಡಿ, ದೇವರ ದರ್ಶನ ಪಡೆದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಬಳಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ಒಟ್ಟಾರೆ ರಾಜ್ಯದಲ್ಲಿ ಮಸೀದಿಗಳ ಆಜಾನ್ ವರ್ಸಸ್ ದೇವಸ್ಥಾನಗಳ ಹನುಮಾನ್ ಚಾಲಿಸ್ ಪಠಣೆಯ ಸಮರ ಇದೀಗ ತಾರಕಕ್ಕೇರಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ