ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಪಿಂಕ್ ಲೈನ್ ಮೆಟ್ರೋ ಓಡಾಟ ಆರಂಭವಾಗುತ್ತದೆ. ಈ ಲೈನ್ನಲ್ಲಿ ಬರುವ ಒಂದು ಸ್ಟೇಷನ್ಗೆ ತಾವರೆಕೆರೆ ಮೆಟ್ರೋ ನಿಲ್ದಾಣ ಎಂದು ಹೆಸರಿಡಲಾಗಿದೆ. ಆದರೆ ಈ ಹೆಸರನ್ನು ತೆಗೆದು ಬಿಸ್ಮಿಲ್ಲಾ ಮೆಟ್ರೋ ಸ್ಟಾಪ್ ಎಂದು ಹೆಸರಿಡಲು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಆರಂಭವಾಗಿದೆ.
ಈ ಕ್ಯಾಂಪೇನ್ಗೆ ಹಿಂದೂ ಸಂಘಟನೆಗಳು ಗರಂ ಆಗಿದ್ದು, ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರನ್ನು ಬದಲಾಯಿಸುವಂತೆ ಇಲ್ಲ ಎಂದು ಹೇಳ್ತಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಪಿಂಕ್ಲೈನ್ ಮೆಟ್ರೋ ನಿಲ್ದಾಣಗಳಿಗೆ ಚಾಲನೆ ಸಿಗುವ ನಿರೀಕ್ಷೆ ಇದೆ. ಕೆಲವೇ ದಿನಗಳು ಬಾಕಿ ಇರುವಂತೆ ಸೋಶಿಯಲ್ ಮೀಡಿಯಾದಲ್ಲಿ ಬಿಲ್ಮಿಲ್ಲಾ ಮೆಟ್ರೋ ನಿಲ್ದಾಣ ಎಂದು ಹೆಸರಿಡುವಂತೆ ಕೂಗು ಜೋರಾಗಿದೆ.
ಬಿಸ್ಮಿಲ್ಲಾ ನಗರಕ್ಕೆ ತಾವರೆಕೆರೆ ಎಂದು ಹೆಸರಿಡಿ
ಬರೀ ಬಿಸ್ಮಿಲ್ಲಾ ಅಂತ ಹೆಸರಿಡೋಕೆ ಕಷ್ಟವಾದರೆ ಬಿಸ್ಮಿಲ್ಲಾ ನಗರ ತಾವರೆಕೆರೆ ಎಂದು ಹೆಸರಿಡಿ. ಇಷ್ಟುದ್ದದ ಹೆಸರುಗಳು ಮೆಟ್ರೋ ನಿಲ್ದಾಣಕ್ಕೆ ಹೊಸತೇನಲ್ಲ ಎಂದು ಮುಸ್ಲಿಂ ನಿವಾಸಿಗಳು ಹಾಗೂ ಪ್ರಮುಖ ಮುಖಂಡರು ಎಂಡಿ ಪಿ.ಸಿ. ಜಾಫರ್ ಅವರನ್ನು ಖುದ್ದು ಭೇಟಿಯಾಗಿ ಔಪಚಾರಿಕ ಮನವಿ ಪತ್ರ ಸಲ್ಲಿಸಿದ್ದಾರೆ.
ಮುಸ್ಲಿಮರೇ ಇಲ್ಲಿ ಜಾಸ್ತಿ ಓಡಾಡ್ತಾರೆ
ತಾವರೆಕೆರೆ ಮೆಟ್ರೋ ನಿಲ್ದಾಣದ ಹತ್ತಿರದಲ್ಲಿಯೇ ಬಿಸ್ಮಿಲ್ಲಾ ನಗರ ಇದೆ. ಈ ಸ್ಟೇಷನ್ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರೇ ಓಡಾಡ್ತಾರೆ. ಸಾವಿರಾರು ಮುಸ್ಲಿಮರು ನಿತ್ಯವೂ ಮೆಟ್ರೋ ಓಡಾಟಕ್ಕೆ ಅವಲಂಬಿಸಿದ್ದಾರೆ. ಹೀಗಿದ್ದಾಗ ಸ್ಥಳೀಯರಿಗೆ ಅಥವಾ ಹೊಸಬರಿಗೆ ಅಡ್ರೆಸ್ ಹೇಳಲು ಸುಲಭವಾಗುವಂತೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಎಂದು ಹೆಸರಿಡಿ ಎಂದಿದ್ದಾರೆ. ಇದನ್ನು ಹಿಂದೂ ಸಂಘಟನೆಗಳು ವಿರೋಧಿಸಿವೆ.
ತಾವರೆಕೆರೆ ಅನ್ನೋಕೆ ಕಷ್ಟವಾಗತ್ತಾ?
ಬಿಸ್ಮಿಲ್ಲಾ ನಗರ ಎಂದು ಅಡ್ರೆಸ್ ಹೇಳೋಕೆ ಸುಲಭವಾಗಬೇಕು ಅನ್ನೋದಾದ್ರೆ ತಾವರೆಕೆರೆ ಸ್ಟಾಪ್ ಅಂತ ಹೇಳೋಕೆ ಕಷ್ಟ ಏನು? ತಾವರೆಕೆರೆ ಸ್ಟಾಪ್ನಲ್ಲಿ ಇಳಿಯಿರಿ ಎಂದು ಹೇಳಬಹುದಲ್ಲಾ? ಇದು ಕಷ್ಟದ ಪದ ಅಲ್ಲ. ಹೌದು ಅಷ್ಟಕ್ಕೂ ಬಿಸ್ಮಿಲ್ಲಾ ಎಂದರೇನು? ಇದು ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲ, ರಾಜ್ಯಕ್ಕೆ ಕೊಡಿಗೆ ಕೊಟ್ಟವರ ಹೆಸರೂ ಅಲ್ಲ ಹೀಗಾಗಿ ಹೆಸರು ಬದಲಾವಣೆ ಮಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಬಿಎಂಆರ್ಸಿಎಲ್ ಹೇಳಿದ್ದೇನು?
ಈ ವಾದ ವಿವಾದದ ನಡುವೆ ಬಿಎಂಆರ್ಸಿಎಲ್ ಏನು ಮಾಡುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈವರೆಗೂ ಹೆಸರು ಬದಲಾವಣೆ ಬಗ್ಗೆ ಬಿಎಂಆರ್ಸಿಎಲ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಮನವಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ಹೆಸರು, ಯಾಕೆ ಇಡಬೇಕು, ಉದ್ದೇಶ ಏನು? ಎಲ್ಲ ಮಾಹಿತಿ ಕಲೆ ಹಾಕಿದ ನಂತರ ಎಂಡಿ ನೇತೃತ್ವದ ಕಮಿಟಿ ಹೆಸರನ್ನು ಫೈನಲ್ ಮಾಡುತ್ತದೆ. ಆ ಕಮಿಟಿಯಲ್ಲಿ ರಾಜ್ಯದ ಇಬ್ಬರು, ಕೇಂದ್ರ ಒಬ್ಬರು ಸದಸ್ಯರು ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್ ಟ್ಯಾಗ್ ಆಗಿದ್ದು ಬಿಟ್ಟು ಯಾವುದೇ ಅಧಿಕೃತ ಮನವಿ ಬಂದಿಲ್ಲ ಎಂದು ಹೇಳಿದೆ.



