ಹೊಸದಿಗಂತ ವರದಿ, ಶಿವಮೊಗ್ಗ :
ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ತೀರ್ಥಹಳ್ಳಿ ಕೋರ್ಟ್ ಗೆ ಹಾಜರುಪಡಿಸಿದ ನಂತರ ಪೊಲೀಸರು ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಆಗುಂಬೆ ಠಾಣೆಯ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಮತಿಯನ್ನು ತನಿಖೆ ನಡೆಸುವ ಸಲುವಾಗಿ ಕಸ್ಟಡಿಗೆ ಪಡೆಯಲಾಗಿದೆ.
ನಕ್ಸಲ್ ಹೋರಾಟದ ಕೇಸ್ ಗಳ ತನಿಖೆ ಶಿವಮೊಗ್ಗದಲ್ಲಿ ಮತ್ತಷ್ಟು ಚುರುಕುಗೊಂಡಿದ್ದು ನಕ್ಸಲ್ ಹೋರಾಟದ ಕೇಸ್ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಕಳೆದ ತಿಂಗಳು ಕೋರ್ಟ್ ಗೆ ಹಾಜರು ಪಡಿಸಿದ್ದ ಬೆನ್ನಲ್ಲೇ ಇದೀಗ ಮತ್ತೋರ್ವ ನಕ್ಸಲ್ ಹೋರಾಟಗಾರ್ತಿಯನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರು ಪಡಿಸಿ ನಂತರ ಕಸ್ಟಡಿಗೆ ಪಡೆದಿದ್ದಾರೆ.
ಶ್ರೀಮತಿ ಯನ್ನು ಸೋಮವಾರ ಬೆಳಗ್ಗೆ ತೀರ್ಥಹಳ್ಳಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪಡಿಸಿದರು. ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಶಿವಮೊಗ್ಗಕ್ಕೆ ಕರೆತಂದು ನಂತರ ತೀರ್ಥಹಳ್ಳಿ ಕೋರ್ಟ್ ಗೆ ಹಾಜರು ಪಡಿಸಲಾಯಿತು. ನಕ್ಸಲ್ ಪ್ರಕರಣದ ಆರೋಪಿಯಾಗಿರುವ ಶ್ರೀಮತಿ ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪದ ತಾರಳ್ಳಿಕೊಡಿಗೆ ಗ್ರಾಮದವರು.
ಶ್ರೀಮತಿಯನ್ನು 2023 ನವೆಂಬರ್ 7 ರಂದು ಕೇರಳ ಪೊಲೀಸರು ಅರೆಸ್ಟ್ ಮಾಡಿದ್ದರು.