ಹೊಸ ದಿಗಂತ ಮಂಗಳೂರು:
ಕೇರಳ-ಕರ್ನಾಟಕ ಗಡಿ ಭಾಗದ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಕಾಡಾನೆ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ನಕ್ಸಲ್ ಸುರೇಶ್ ಅಲಿಯಾಸ್ ಪ್ರದೀಪ್ ಕೇರಳದ ಕಣ್ಣೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಕಂಜಿರಕೊಳ್ಳಿ ಚಿತ್ತಾರಿ ಕಾಲೋನಿ ಪರಿಸರದಲ್ಲಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುರೇಶ್ನನ್ನು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆತ ಚೇತರಿಸಿಕೊಳ್ಳುತ್ತಿದ್ದು, ಈ ನಡುವೆ ಹೇಳಿಕೆ ನೀಡಿದ್ದಾನೆ.
ಗಾಲಿ ಕುರ್ಚಿಯಲ್ಲಿ ಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಆತ, ಕಳೆದ 23 ವರ್ಷಗಳಿಂದ ನಕ್ಸಲ್ ಚಳವಳಿಯಲ್ಲಿದ್ದೆ. ಈ ಹಿಂದೆಯೇ ಶರಣಾಗಬೇಕೆಂದುಕೊಂಡಿದ್ದೆ. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಮಾವೋವಾದಿಯಾಗಿ ಏನೂ ಮಾಡಲು ಆಗಿಲ್ಲ. ನಮ್ಮ ಸಂಗಾತಿಗಳಿಗೂ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಬದಲಾವಣೆ ತರಲು ಆಗಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ಈತನ ಮೇಲೆ ಉಡುಪಿ, ಚಿಕ್ಕಮಗಳೂರು ಸಹಿತ ರಾಜ್ಯದ ಹಲವೆಡೆ 35ಕ್ಕೂ ಹೆಚ್ಚು ಪ್ರಕರಣಗಳಿವೆ.