ಭಾರತೀಯ ಸೇನೆಯ 31ನೇ ಸೇನಾ ಮುಖ್ಯಸ್ಥರಾಗಿ (Chief of the Army Staff) ಜನರಲ್ ಧೀರಜ್ ಸೇಠ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ನಾಲ್ಕು ದಶಕಗಳಿಗೂ ಅಧಿಕ ಸೇವೆ ಸಲ್ಲಿಸಿ ನಿವೃತ್ತರಾದ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಅವರು ಅಧಿಕಾರ ವಹಿಸಿಕೊಂಡರು.
ಈವರೆಗೆ ಸೇನೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಜನರಲ್ ಧೀರಜ್ ಸೇಠ್, ಸುಮಾರು 13 ಲಕ್ಷ ಸೈನಿಕರನ್ನು ಹೊಂದಿರುವ ಭಾರತೀಯ ಸೇನೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಗಡಿ ಭದ್ರತೆ, ಸೇನೆಯ ಆಧುನೀಕರಣ ಹಾಗೂ ಆತ್ಮನಿರ್ಭರ ಸೇನೆ ನಿರ್ಮಾಣದ ಮಹತ್ವದ ಹಂತದಲ್ಲಿ ಅವರು ಜವಾಬ್ದಾರಿ ಸ್ವೀಕರಿಸಿದ್ದಾರೆ.
1986ರ ಡಿಸೆಂಬರ್ನಲ್ಲಿ ಆರ್ಮರ್ಡ್ ಕಾರ್ಪ್ಸ್ ವಿಭಾಗದಲ್ಲಿ ಸೇನೆಗೆ ಸೇರ್ಪಡೆಯಾದ ಧೀರಜ್ ಸೇಠ್, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA), ಖಡಕ್ವಾಸ್ಲಾ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ತಮ್ಮ ಸುಮಾರು 40 ವರ್ಷಗಳ ಸೈನಿಕ ಸೇವೆಯಲ್ಲಿ ಪಶ್ಚಿಮ ಗಡಿಯ ದಕ್ಷಿಣ ಪಶ್ಚಿಮ ಕಮಾಂಡ್ ಹಾಗೂ ದಕ್ಷಿಣ ಕಮಾಂಡ್ ಸೇರಿದಂತೆ ಎರಡು ಪ್ರಮುಖ ಕಾರ್ಯಾಚರಣಾ ಕಮಾಂಡ್ಗಳಿಗೆ ನಾಯಕತ್ವ ನೀಡಿದ ಅಪರೂಪದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:
ಜಮ್ಮು-ಕಾಶ್ಮೀರದ ಉಗ್ರ ನಿಗ್ರಹ ಕಾರ್ಯಾಚರಣೆ, ಪಶ್ಚಿಮ ಗಡಿಯ ಸೇನಾ ಕಾರ್ಯಾಚರಣೆ, ದೆಹಲಿ ಪ್ರದೇಶದ ಕಮಾಂಡ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಸೇನೆಯ ಸಾಮರ್ಥ್ಯ ವೃದ್ಧಿ, ಆಧುನೀಕರಣ ಹಾಗೂ ಭವಿಷ್ಯದ ಯುದ್ಧ ಸನ್ನದ್ಧತೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಆಪರೇಷನ್ ಸಿಂಧೂರ್ ವೇಳೆ ದಕ್ಷಿಣ ಕಮಾಂಡ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಧೀರಜ್ ಸೇಠ್, ಪ್ಯಾರಿಸ್ನ ಕಮಾಂಡ್ ಅಂಡ್ ಸ್ಟಾಫ್ ಕೋರ್ಸ್ ಹಾಗೂ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಪದವೀಧರರಾಗಿದ್ದು, ದೇಶ-ವಿದೇಶದ ಮಿಲಿಟರಿ ಶಿಕ್ಷಣದಲ್ಲಿಯೂ ವಿಶೇಷ ಸಾಧನೆ ಮಾಡಿದ್ದಾರೆ.



